ವಿಧಾನಸೌಧದಲ್ಲಿ ಸಚಿವರಿಬ್ಬರ ಬೈದಾಟ
ವಸತಿ ಸಚಿವ ವಿ ಸೋಮಣ್ಣ ಮತ್ತು ಸಹಕಾರ ಸಚಿವ ಬಿಜೆ ಪುಟ್ಟಸ್ವಾಮಿ ಅವರು ಅಕ್ಕಪಕ್ಕದಲ್ಲೇ ಕುಳಿತು ಪರಸ್ಪರ ಬೈಗುಳ/ನಿಂದನೆಯಲ್ಲಿ ತೊಡಗಿದರು. ಇವರ ಮಧ್ಯೆ ಆಸೀನರಾಗಿ, ಹೈರಾಣಗೊಂಡ ಕಾನೂನು ಸಚಿವ ಎಸ್ ಸುರೇಶ್ ಕುಮಾರ್ ಇಬ್ಬರನ್ನೂ ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಖುದ್ದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇದಕ್ಕೆ ಸಾಕ್ಷಿಯಾದರು.
'ವಯಸ್ಸಿನಲ್ಲಿ ಹಿರಿಯರು ಎಂಬ ಕಾರಣಕ್ಕೆ ನಿನಗೆ ಮರ್ಯಾದೆ ಕೊಟ್ಟು ಮಾತನಾಡಬೇಕಾ? ನಿನ್ನ ಕಥೆಯೇನು ಎಂಬುದು ನನಗೆ ಗೊತ್ತಿಲ್ವಾ? ನಿನ್ನನ್ನು ಬಿಜೆಪಿಗೆ ಕರೆತಂದಿದ್ದೇ ನಾನು' ಎಂದು ಸೋಮಣ್ಣ ಅವರು ಪುಟ್ಟಸ್ವಾಮಿ ಮೇಲೆ ಹರಿಹಾಯ್ದರು. ಈ ಹಿಂದೆ ಪುಟ್ಟಸ್ವಾಮಿ ಅವರು ತಮ್ಮ ಮೇಲೆ ವಾಗ್ದಾಳಿ ನಡೆಸಿದ್ದನ್ನು ನೆಪವಾಗಿಸಿಕೊಂಡು ಮೊದಲು ಸೋಮಣ್ಣನೇ ಮಾತಿಗಿಳಿದಿದ್ದರು.
ಪುಟ್ಟಸ್ವಾಮಿ ಸಹ ಸೋಮಣ್ಣಗೆ ತಿರುಗೇಟು ನೀಡಲು ಅಣಿಯಾದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸುರೇಶ್ ಕುಮಾರ್ ಅವರು ಇಬ್ಬರ ಮಧ್ಯೆ ಸಂಧಾನ ಮೂಡಿಸುವಲ್ಲಿ ಹೆಣಗಾಡಿದರು. ಸಭೆಯಲ್ಲಿದ್ದವರಿಗೆ ಬಿಟ್ಟಿ ಮನರಂಜನೆ ಸಿಕ್ಕಂತಾಗಿದೆ. ಆದರೆ ಇದನ್ನು ಟಿವಿಗಳಲ್ಲಿ ಕಂಡ ಜನಕ್ಕೆ ಶಿಸ್ತಿನ ಪಕ್ಷ ಬಿಜೆಪಿಯ ಇಂದಿನ ದುಃಸ್ಥಿತಿಯನ್ನು ಕಂಡು ನಗಬೇಕೋ, ಅಳಬೇಕೋ ತಿಳಿಯದಾಗಿದೆ.