ತಿರುಮಲದಲ್ಲಿ 3 ನಾಮ ಕಡ್ಡಾಯ ಹಾಗೂ 2 ಸುದ್ದಿಗಳು
ಆ ಆದೇಶವನ್ನು ಟಿಟಿಡಿಯ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವ ಎಲ್ ವಿ ಸುಬ್ರಮಣ್ಯಂ ಅವರು ಶನಿವಾರ ಹೊರಡಿಸಿದ್ದಾರೆ. ಹಣೆಯ ಮೇಲೆ ಎಲ್ಲ ಸಿಬ್ಬಂದಿಗಳೂ ತಿಲಕ ಧರಿಸುವುದರಿಂದ ದೇವಸ್ಥಾನದ ಪ್ರತಿಷ್ಠೆ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪರಿಪಾಠವನ್ನು ಕಾರ್ತೀಕ ಮಾಸದಿಂದ ಯಾರಾದರೂ ಪಾಲಿಸಲು ವಿಫಲರಾದರೆ ಅವರನ್ನು ಟಿಟಿಡಿಯಿಂದಲೇ ಕಿತ್ತುಹಾಕಲಾಗುವುದು ಎಂದು ಮಾಜಿ ಎಕ್ಸಿಕ್ಯೂಟಿವ್ ಆಫೀಸರ್ ಪಿ.ವಿ.ಆರ್.ಕೆ. ಪ್ರಸಾದ್ ಅವರು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಕೆಲಸ ಉಳಿಸಿಕೊಳ್ಳಬೇಕಿದ್ದರೆ ಎಲ್ಲ ಸಿಬ್ಬಂದಿಗಳೂ ನಾಮ ಹಾಕಿಕೊಳ್ಳಲೇಬೇಕು.
ಸಿಬ್ಬಂದಿಗಳು ಮಾತ್ರವಲ್ಲ ತಿರುಪತಿಗೆ ದಿನನಿತ್ಯ ಬರುವ ಲಕ್ಷಾಂತರ ಭಕ್ತಾದಿಗಳೆಲ್ಲ ಈ ನಾಮವನ್ನು ಹಾಕಿಕೊಳ್ಳಲೇಬೇಕು. ಹಾಕಿಕೊಂಡವರಿಗೆ ಮಾತ್ರ ಪ್ರವೇಶವೆಂದು ಪತ್ರಿಕೆಯೊಂದರಲ್ಲಿ ಸೋಮವಾರ ಪ್ರಕಟವಾಗಿದ್ದು, ಭಕ್ತರನ್ನು ಭಾರೀ ಗೊಂದಲಕ್ಕೆ ನೂಕಿತ್ತು. ಈಗ, ಸಿಬ್ಬಂದಿಗಳು ಮಾತ್ರ ನಾಮ ಹಾಕಿಕೊಳ್ಳಬೇಕೆಂಬುದು ಅಧಿಕೃತವಾಗಿದೆ. ಭಕ್ತಾದಿಗಳು ಎಂದಿನಂತೆ ದೇವಸ್ಥಾನ ಪ್ರವೇಶಿಸಬಹುದು.
ಜ.1ಕ್ಕೆ ದರ್ಶನಕ್ಕಾಗಿ ವಿಶೇಷ ಟಿಕೆಟ್ : 2013ರ ಹೊಸವರ್ಷದ ಮೊದಲ ದಿನ ಜನವರಿ 1ರಂದು ಏಳುಕೊಂಡಲವಾಡ ಗೋವಿಂದನ ವಿಶೇಷ ದರ್ಶನ ಪಡೆಯಬೇಕೆನ್ನುವವರಿಗಾಗಿ ಟಿಟಿಡಿ ನವೆಂಬರ್ 7ರಂದು ಕೇವಲ 50 ರು.ಗಳ ವಿಶೇಷ ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸವರ್ಷದ ದಿನದಂದು ಸಾಗರೋಪಾದಿಯಲ್ಲಿ ಬರುವ ಭಕ್ತಾದಿಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಟಿಕೆಟ್ಗಳನ್ನು ದೇಶದಾದ್ಯಂತ ಇರುವ 'ಈ-ದರ್ಶನ' ಕೌಂಟರಲ್ಲಿ ಪಡೆಯಬಹುದಾಗಿದೆ. ಕೋಟಾ ಇರುವಷ್ಟೇ ಟಿಕೆಟ್ಗಳನ್ನು ಮಾರಲಾಗುವುದು ಎಂದು ಟಿಟಿಡಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆಧ್ಯಾತ್ಮಿಕ ಗ್ರಂಥಾಲಯ ಸ್ಥಾಪನೆ : ಹಿಂದೂ ಸನಾತನ ಧರ್ಮದ ಜ್ಞಾನ ಸಮೃದ್ಧವಾಗಿರುವ ಪುರಾತನ ಗ್ರಂಥಗಳನ್ನು ಕಾಪಾಡುವ ಮತ್ತು ಮುಂದಿನ ಪೀಳಿಗೆಗಳಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ಆಂಧ್ರಪ್ರದೇಶದ ಪ್ರತಿ ಜಿಲ್ಲೆಗಳಲ್ಲಿ ಆಧ್ಯಾತ್ಮಿಕ ಗ್ರಂಥಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಎಕ್ಸಿಕ್ಯೂಟಿವ್ ಆಫೀಸರ್ ಎಲ್ ವಿ ಸುಬ್ರಮಣ್ಯಂ ಅವರು ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ತಿಳಿಯುವಂತಹ ಪುಸ್ತಕಗಳನ್ನು ಈ ಗ್ರಂಥಾಲಯಗಳಲ್ಲಿ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.