ಪಾಪ, ಪಾಕ್ ಉಗ್ರ ಕಸಬ್ ಗೆ ಡೆಂಗ್ಯೂ ಜ್ವರ
ಡೆಂಗ್ಯೂ ಜ್ವರಕ್ಕೆ ಕಾರಣವಾಗುವುದು ಒಂದು ಯಃಕಶ್ಚಿತ್ ಸೊಳ್ಳೆ Aedes mosquito. ಕಸಬ್ ನನ್ನು ಅಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿರುವಾಗ ಅತ್ಯಧಿಕ ಭದ್ರತೆಯ ಆರ್ಥರ್ ಜೈಲಿನೊಳಕ್ಕೆ ನುಸುಳಿದ ಈ ಸೊಳ್ಳೆ sting operation ನಡೆಸಿದ್ದಾದರೂ ಹೇಗೆ? ಎಂದು ಜೈಲು ಸಿಬ್ಬಂದಿ ಈಗ ತಲೆಯ ಮೇಲೆ ಕೈಹೊತ್ತುಕುಳಿತಿದ್ದಾರೆ. ಆದರೆ ಕಸಬ್ ಗೆ ಡೆಂಗ್ಯೂ ಅಂತೆ ಎಂಬ ಸುದ್ದಿ ಕೇಳಿದ ಭಾರತದ ಕೋಟಿ ಕೋಟಿ ಮಂದಿ ಆ ಸೊಳ್ಳೆಗೆ ಕೋಟಿ ವಂದನೆ ಸಲ್ಲಿಸುತ್ತಿದ್ದಾರೆ.
ಮುಂಬೈನ ಸರಕಾರಿ JJ Hospital ವೈದ್ಯರು ನಿನ್ನೆ ಭಾನುವಾರ ಜೈಲಿಗೆ ಭೇಟಿ ನೀಡಿ, ಕಸಬ್ ಆರೋಗ್ಯವನ್ನು ತಪಾಸಣೆ ಮಾಡಿದ್ದಾರೆ. ಕಸಬ್ ವಿಪರೀತ ಜ್ವರದಿಂದ ಬಳಲುಜತ್ತಿರುವುದು ನಿಜವಾದರೂ ಡೆಂಗ್ಯೂನೇ ಅವನನ್ನು ಬಾಧಿಸುತ್ತಿದೆ ಎಂದು ನಿಖರವಾಗಿ ಹೇಳಲಾಗದು. ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಾಗಿದೆ ಎಂದಿದ್ದಾರೆ. ಆದರೆ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ಕಸಬ್ ನನ್ನು JJ Hospital ಆಸ್ಪತ್ರೆಗೆ ಸ್ಥಳಾಂತರಿಸುವುದು ಸಾಧ್ಯವಿಲ್ಲ ಎಂದು ಜೈಲು ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.
'ಅಕ್ಟೋಬರ್ 31ರ ರಾತ್ರಿಯಿಂದ ಕಸಬ್ ಗೆ ಈ ಜ್ವರ ಬಂದಿದೆ. ರಕ್ತ ಪರೀಕ್ಷೆಯಿಂದ ಆತನಿಗೆ ಡೆಂಗ್ಯೂ ಜ್ವರ ಬಂದಿರುವುದು ದೃಢಪಟ್ಟಿದೆ' ಎಂದು ಹೆಸರು ಹೇಳಲಿಚ್ಚಿಸದ ಜೈಲು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
2008ರ ನವೆಂಬರ್ 26ರ ಕರಾಳ ದಿನದಂದು 169 ಮಂದಿಯನ್ನು ಬಲಿ ತೆಗೆದುಕೊಂಡ ಒಟ್ಟು 10 ಉಗ್ರರ ಪೈಕಿ 9 ಮಂದಿ ಆತ್ಮಾಹುತಿ ದಾಳಿ ವೇಳೆಯೇ ಸತ್ತರು. ಆದರೆ ಕಸಬ್ ನನ್ನು ಸಬ್ಇನ್ಸ್ಪೆಕ್ಟರ್ ತುಕರಾಂ ಓಂಬಳೆ ಅವರು ತಮ್ಮ ಜೀವದ ಹಂಗು ತೊರೆದು ಪೈಶಾಚಿಕವಾಗಿ ದಾಳಿ ಮಾಡುತ್ತಿದ್ದ ಕಸಬ್ ನನ್ನು ಅಕ್ಷರಶಃ ತಬ್ಬಿಹಿಡಿದು, ಅವನನ್ನು ಜೀವಂತವಾಗಿ ಸೆರೆ ಹಿಡಿದರು.
ಇದೀಗ ಭಾರತ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅವನನ್ನು ಪೊರೆಯುತ್ತಿದೆ. ಬಿರಿಯಾನಿ-ಪ್ರಿಯ ಕಸಬ್ ಸಹ ನಾನು ಏನೂ ಆರಿಯದ ಅಮಾಯಕ ಯುವಕ, ತನಗೆ ಜೀವದಾನ ನೀಡಬೇಕು ಎಂದು ಸತತವಾಗಿ ಮೊರೆಯಿಡುತ್ತಿದ್ದಾರೆ. ಆದರೆ ಆತ್ಮಾಹುತಿ ದಾಳಿಯಲ್ಲಿ ಸಾಯಲೆಂದೇ ಬಂದವನು ಈಗ ಅಂಜುಬುರುಕನಾಗಿ ಗಲ್ಲು ಶಿಕ್ಷೆಗೆ ಗೋಣೊಡ್ಡಲು ಹಿಂಜರಿಯುತ್ತಿರುವುದೇಕೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ ಈಗ ಕಸಬ್ ಗೆ ಮಾರಣಾಂತಿಕ ರೋಗ ತಗುಲಿದೆ. ಅದಕ್ಕೇ ಹೇಳೋದು, ಪ್ರಕೃತಿ ಮಾತೆಯೇ ಕೆಲವೊಮ್ಮೆ ಸರಿಯಾದ ತೀರ್ಪು ನೀಡುತ್ತಾಳೆ ಎನ್ನುವುದು.