ಬಿಜೆಪಿ ಗರ್ಭಗುಡಿಯಲ್ಲಿರುವ ಅಗೋಚರ ಶಕ್ತಿ ಯಾವುದು
ನಾನು ಈಗಾಗಲೇ ಬಿಜೆಪಿಯಿಂದ ಮಾನಸಿಕವಾಗಿ ಹೊರನಡೆದಿದ್ದೇನೆ. ಬಿಜೆಪಿ ಇಂದು ಗೊಂದಲದ ಗೂಡಾಗಿದೆ. ಅದಕ್ಕೆ ಪ್ರಮುಖ ಕಾರಣ ರಾಜ್ಯಾಧ್ಯಕ್ಷ ಈಶ್ವರಪ್ಪ. ಬಿಜೆಪಿ ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಬಸವರಾಜ್ ಬಿಜೆಪಿಗೆ ಸವಾಲೆಸೆದಿದ್ದಾರೆ.
ನಾನು ನನ್ನ 35ನೇ ವರ್ಷದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೆ. ನನ್ನ ಮಗನಿಗೆ ಈಗ 37 ವರ್ಷ, ಏನು ಮಾಡಬೇಕು ಏನು ಮಾಡಬಾರದೆಂದು ಅವನಿಗೆ ತಿಳಿದಿದೆ. ಅವನು ಎಂಬಿಎ ಪದವೀಧರ, ರಾಜಕೀಯಕ್ಕೆ ಇಳಿಯಬೇಕೆಂದು ಅವನು ಬಯಸಿದರೆ ಅದನ್ನು ನಾನು ಸ್ವಾಗತಿಸುವುದೂ ಇಲ್ಲ ವಿರೋಧಿಸುವುದೂ ಇಲ್ಲ ಎಂದು ಬಸವರಾಜ್ ಸ್ಪಷ್ಟ ಪಡಿಸಿದ್ದಾರೆ.
ಇತ್ತೀಚಿಗೆ ಸೋನಿಯಾ ಗಾಂಧಿ ತುಮಕೂರಿಗೆ ಭೇಟಿ ನೀಡಿದಾಗ ಹೆಲಿಪ್ಯಾಡ್ ನಲ್ಲಿ ಅವರನ್ನು ನಾನು ಸ್ವಾಗತಿಸಲು ಹೋಗಿದ್ದು ನಿಜ. ಅದನ್ನು ಬಿಜೆಪಿಯವರು ಅಪಾರ್ಥ ಮಾಡಿಕೊಂಡರೆ ಅದು ನನ್ನ ತಪ್ಪಲ್ಲ. ತುಮಕೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಾನು ರಾಷ್ಟ್ರೀಯ ನಾಯಕರು ನಮ್ಮ ಕ್ಷೇತ್ರಕ್ಕೆ ಬಂದಾಗ ಸ್ವಾಗತಿಸುವುದು ನನ್ನ ಕರ್ತವ್ಯ ಎಂದು ಬಸವರಾಜ್ ಪ್ರತಿಪಾದಿಸಿದ್ದಾರೆ.
ಯಡಿಯೂರಪ್ಪ ಎಲ್ಲಿ ಇರುತ್ತಾರೋ ನಾನು ಅಲ್ಲಿರುತ್ತೇನೆ. ಅವರು ಮಾನಸಿಕವಾಗಿ ಈಗಾಗಲೇ ಬಿಜೆಪಿಯಿಂದ ಹೊರ ನಡೆದಿದ್ದಾರೆ. ಅವರು ನನ್ನ ನಾಯಕರು ಅವರ ಆದೇಶವನ್ನು ನಾನು ಪಾಲಿಸುತ್ತೇನೆ ಎಂದು ಬಸವರಾಜ್ ರಾಜ್ಯ ಬಿಜೆಪಿ ನಾಯಕರಿಗೆ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.
ಟಿವಿ9 ಚಕ್ರವ್ಯೂಹ ( ನ 4ರ ಸಂಚಿಕೆ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಬಸವರಾಜ್, ಕಾಡಿನ ಮರಗಳನ್ನು ಕಡಿದು ಅರಮನೆ ನಿರ್ಮಿಸುವವನು ರಾಜ್ಯದ ಪರಿಸರ ಸಚಿವ. ನನ್ನ ವಿರುದ್ದ ಹೇಳಿಕೆ ನೀಡುವ ಯೋಗ್ಯತೆ ಅವನಿಗಿಲ್ಲ. ಅವನು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎನ್ನುವ ವಿಚಾರ ನನಗೆ ಚೆನ್ನಾಗಿ ಅರಿತಿದೆ ಎಂದು ಸಚಿವ ಸೊಗಡು ಶಿವಣ್ಣ ಅವರನ್ನು ಬಸವರಾಜ್ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಲ್ಲ. ನನ್ನ ನಿಷ್ಠೆ ಯಡಿಯೂರಪ್ಪ ಅವರ ಮೇಲೆ ಎಂದು ಬಸವರಾಜ್ ಈ ಸಂದರ್ಭದಲ್ಲಿ ಹೇಳಿದ್ದಾರೆ.