ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಆರೋಗ್ಯ ಗಂಭೀರ
ಪಕ್ಷದ ಹಾಲಿ ಅಧ್ಯಕ್ಷ ಬಾಖಾ ಠಾಕ್ರೆ ಅವರ ಆರೋಗ್ಯ ಗಂಭೀರವಾಗಿರುವುದರ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಸಭೆಯಲ್ಲಿ ಉದ್ಧವ್ ಠಾಕ್ರೆ ಅವರಿಗೆ ಪಕ್ಷದ ಚುಕ್ಕಾಣಿ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಆದರೆ ಇದು ಪಕ್ಷದ ಪೂರ್ವನಿಗದಿತ ಸಭೆಯಾಗಿದೆ. ಲೋಕಸಭೆ ಮತ್ತು ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಪಕ್ಷದ ಸಂಸದರು ಮತ್ತು ಶಾಸಕರ ಸಭೆ ವಾಡಿಕೆಯಂತೆ ಕರೆಯಲಾಗಿದೆ. ಇದಕ್ಕೆ ಹೆಚ್ಚಿನ ಮಹತ್ವ ಬೇಡ. ಅದರಲ್ಲೂ ಬಾಳ ಠಾಕ್ರೆ ಅವರ ಅನಾರೋಗ್ಯದಿಂದಾಗಿ ಸಭೆಯನ್ನು ಆಯೋಜಿಸಿಲ್ಲ ಎಂದು ಹೇಳಿದ್ದಾರೆ.
86 ವರ್ಷದ ಠಾಕ್ರೆಯ ಸುಮಾರು ದಿನಗಳಿಂದ ಅಸ್ವಸ್ಥರಾಗಿದ್ದಾರೆ. ಮುಂಬೈನಲ್ಲಿ ಕಳೆದ ವಾರ ನಡೆದ ದಸರಾ ಮಹೋತ್ಸವದಲ್ಲಿ ಅವರು ವಿಡಿಯೋ ಮೂಲಕ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ತನ್ನ ಮಗ ಉದ್ಧವ್ ಠಾಕ್ರೆ ಮತ್ತು ಮೊಮ್ಮಗ ಆದಿತ್ಯನನ್ನು ಬೆಂಬಲಿಸುವಂತೆ ಕಾರ್ಯಕರ್ತರನ್ನು ಕೋರಿದ್ದರು.
'ನನಗೀಗ ನಡೆದಾಡುವ ಚೈತನ್ಯ ಇಲ್ಲ. ದೈಹಿಕವಾಗಿ ಕುಸಿದಿದ್ದೇನೆ. ದಯವಿಟ್ಟು ನನ್ನ ಮಗ-ಮೊಮ್ಮಗನನ್ನು ಬೆಂಬಲಿಸಿ' ಎಂದು ಪಕ್ಷದ ಕಾರ್ಯಕರ್ತರಲ್ಲಿ ಅಲವತ್ತುಕೊಂಡಿದ್ದರು.
ಉದ್ಧವ್ ಠಾಕ್ರೆಯನ್ನು ಪಕ್ಷದ ಮುಖ್ಯಸ್ಥನನ್ನಾಗಿ ಮಾಡಿದ ಬಳಿಕ ಅಂದರೆ 2006ರಿಂದ ರಾಜ್ ಠಾಕ್ರೆ ಬಾಳಾರಿಂದ ದೂರವಾಗಿದ್ದರು. ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು (MNS) ಕಟ್ಟಿದ್ದರು. ಆದರೆ ನಿನ್ನೆ ಬಾಳ ಠಾಕ್ರೆ ರಾಜ್ ರನ್ನು ಭೇಟಿ ಮಾಡಿದ್ದರು.
ಮೊನ್ನೆ ಜುಲೈನಲ್ಲಿ ಉದ್ಧವ್ ಠಾಕ್ರೆ ಆರೋಗ್ಯ ಹದಗೆಟ್ಟಿ ಆಸ್ಪತ್ರೆ ಸೇರಿದ್ದಾಗ, ರಾಜ್ ಠಾಕ್ರೆ ಅವರು ಬಾಳಾ ಮತ್ತು ಉದ್ಧವ್ ಅವರೊಂದಿಗೆ ಮತ್ತೆ ಬಾಂಧವ್ಯ ಬೆಸೆದಿದ್ದರು.
1966ರಲ್ಲಿ ಸ್ಥಾಪಿತವಾದ ಶಿವಸೇನೆ ಇನ್ನೂ ಮಹಾರಾಷ್ಟ್ರಕ್ಕೇ ಸೀಮಿತವಾಗಿದೆ. ರಾಷ್ಟ್ರೀಯ ಮಟ್ಟದ ಪಕ್ಷವೆಂಬ ಗೌರವ ಇನ್ನೂ ಶಿವಸೇನೆಗೆ ದಕ್ಕಿಲ್ಲ. MNS ಸದ್ಯದಲ್ಲೇ ಶಿವಸೇನೆ ಜತೆ ವಿಲೀನವಾಗುವ ಲಕ್ಷಣಗಳಿವೆ.