ಜಗನ್ ರೆಡ್ಡಿ ಬಿಡುಗಡೆ ಬಗ್ಗೆ ಸಿಬಿಐ ಸುಳಿವು
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ಚಾರ್ಚ್ ಶೀಟ್ ಕೋರ್ಟಿಗೆ ಸಲ್ಲಿಸಲು ಇನ್ನೂ ಕಾಲಾವಕಾಶ ಬೇಕಿದೆ.
ಸುಮಾರು 7 ಪ್ರಕರಣಗಳಲ್ಲಿ ಸೇರಿಸಿ ಚಾರ್ಚ್ ಶೀಟ್ ಹಾಕಬೇಕಾಗುತ್ತದೆ. ಸಂಡೂರು ಪವರ್ ಕಂಪನಿ, ಭಾರತಿ ರಘುರಾಮ್ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್, ಪೆನ್ನಾ ಸಿಮೆಂಟ್ಸ್, ದಾಲ್ಮಿಯಾ ಸಿಮೆಂಟ್ಸ್, ಕೋಲ್ಕತ್ತಾ ಭ್ರೀಫ್ ಕೇಸ್ ಕಂಪನಿ ಹಾಗೂ ಇಂದು ಲೇಪಾಕ್ಷಿ ನಾಲೆಡ್ಜ್ ಪಾರ್ಕ್ ಮುಂತಾದ ಕಂಪನಿಗಳ ಮೂಲಕ ಗಳಿಸಿದ ಅಕ್ರಮ ಆಸ್ತಿಗಳ ವಿವರ ಸಂಗ್ರಹಿಸಿ ದಾಖಲಿಸಲಾಗಿದೆ.
ಆದರೆ, ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ದಾಖಲಿಸಲು ಸಿಬಿಐ ತಂಡ ಯಾವುದೇ ಕಾಲಮಿತಿಯನ್ನು ಹಾಕಿಕೊಂಡಿಲ್ಲ. ಇನ್ನೂ ಜಗನ್ ಅವರ ಬೇನಾಮಿ ಕಂಪನಿಗಳ ಪಟ್ಟಿ ತುಂಬಾ ದೊಡ್ಡದಿದೆ ಎಂದು ಸಿಬಿಐ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಹೇಳಿದ್ದಾರೆ.
ಮಾರ್ಚ್ ತನಕ ಜೈಲುವಾಸ ಖಾಯಂ: ವೈಎಸ್ ಜಗನ್ ಅವರ ಅಕ್ರಮ ಆಸ್ತಿ ಪ್ರಕರಣ ಕುರಿತು ಸಂಪೂರ್ಣ ದೋಷಾರೋಪಣ ಪಟ್ಟಿ ಸಲ್ಲಿಸಲು 2013ರ ಮಾರ್ಚ್ ತನಕ ಸಿಬಿಐ ತಂಡಕ್ಕೆ ಕಾಲಾವಕಾಶ ವಿಧಿಸಲಾಗಿದೆ. ಹೀಗಾಗಿ ಕನಿಷ್ಠ ಮುಂದಿನ ಮಾರ್ಚ್ ತನಕ ಜಗನ್ ಜೈಲಿನಲ್ಲಿ ಉಳಿಯುವುದು ಖಾಯಂ ಎನ್ನಬಹುದು.
ಸದ್ಯಕ್ಕೆ ಹೈದರಾಬಾದಿನಲ್ಲಿರುವ ಜಗನ್ ಮೋಹನ್ ರೆಡ್ಡಿ ಅವರ ಲೋಟಸ್ ಪಾಂಡ್ ಭವ್ಯ ಬಂಗಲೆಯ ಮೌಲ್ಯ ಮಾಪನವನ್ನು ಸಿಬಿಐ ತಂಡ ಮುಗಿಸಿದೆ. ಮುಂದಿನ ಮೌಲ್ಯಮಾಪನ ಬೆಂಗಳೂರಿನಲ್ಲಿರುವ ಬಂಗಲೆಗಳು ಇತರೆ ಸ್ಥಿರಾಸ್ಥಿಗಳ ಮೇಲೆ ಬಿದ್ದಿದೆ.
ಸುಪ್ರೀಂಕೋರ್ಟ್ ಈಗಾಗಲೇ ಒಂದು ಬಾರಿ ಜಗನ್ ಮೋಹನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಸಿಬಿಐ ತಂಡ ಎಲ್ಲಾ ಮೌಲ್ಯ ಮಾಪನ ಮುಗಿಸಿ, ಚಾರ್ಚ್ ಶೀಟ್ ಗಳನ್ನು ಸಮೀಕರಿಸಿ ಕೋರ್ಟಿಗೆ ಸಲ್ಲಿಸುವ ತನಕ ಜೈಲಿನಲ್ಲಿ ಉಳಿಯುವುದು ಜಗನ್ ಗೆ ಅನಿವಾರ್ಯವಾಗಿದೆ.