ಕರ್ನಾಟಕದಲ್ಲಿ ಕೃಷ್ಣನ ಹೆಸರೇ ಲೋಕಪ್ರಿಯ
ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 3.45 ಗಂಟೆ ಸುಮಾರಿಗೆ ಆಗಮಿಸಿದ ಎಸ್ ಎಂ ಕೃಷ್ಣ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಕೆಪಿಸಿಸಿ ಶಾಸಕರು, ಸಂಸದರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನ ಸಮೂಹದ ನಡುವೆ ರಾಜಕಳೆಯಿಂದ ಕೃಷ್ಣನಿಂದ ನಡೆದು ಬಂದರು.
ಭರ್ಜರಿ ಸ್ವಾಗತ ಬೇಡ ಎಂದಿದ್ದ ಕೃಷ್ಣ: ತಮ್ಮ ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ ಭರ್ಜರಿ ಸ್ವಾಗತ ಕೋರುವುದಕ್ಕೆ ಕೃಷ್ಣ ತಡೆ ಒಡ್ಡಿದ್ದರು, ಸಾರ್ವಜನಿಕರಿಗೆ ಅನಗತ್ಯವಾಗಿ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟು ಮಾಡುವುದು ಬೇಡ ಎಂದು ಸಲಹೆ ನೀಡಿದ್ದರು.
ಅದರೆ, ಕೃಷ್ಣ ಅವರ ಆಗಮನ ಖುಷಿಯಲ್ಲಿ ಮಂಡ್ಯ, ಮದ್ದೂರು, ರಾಮನಗರ ಕಡೆಯಿಂದಲೂ ಅವರ ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಅಆಗಮಿಸಿ ಸ್ವಾಗತ ಕೋರಿದರು.
'ಇದು ನನ್ನ ರಾಜಕೀಯದಲ್ಲಿ ವಿಶೇಷವಾದ ಘಳಿಗೆ. ಅಭಿಮಾನಿಗಳ ಸ್ವಾಗತದಿಂದ ಮನತುಂಬಿ ಬಂದಿದೆ ಎಂದ ಕೃಷ್ಣ ಅವರು ರಾಜ್ಯ ರಾಜಕೀಯದಲ್ಲಿ ಈಗ ಯಾವ ಪಾತ್ರ ವಹಿಸುತ್ತೀರಾ? ಎಂದು ಸುವರ್ಣ ನ್ಯೂಸ್ ಚಾನೆಲ್ ವರದಿಗಾರನ ಪ್ರಶ್ನೆಗೆ ಒಗಟಾಗಿ ಉತ್ತರಿಸಿದರು.
'ಕಾಲಗರ್ಭದಲ್ಲಿ ಏನು ಅಡಗಿದೆಯೋ ಗೊತ್ತಿಲ್ಲ ಮುಂದಿನ ದಿನಗಳಲ್ಲಿ ಕಾದು ನೋಡೊಣ ಎಂದು ನಗುತ್ತಾ ಹೇಳಿದರು. ವಿಮಾನ ನಿಲ್ದಾಣದಿಂದ ನೇರ ಸದಾಶಿವ ನಗರದ ಮನೆಗೆ ಕೃಷ್ಣ ಅವರು ತೆರಳಿದ್ದು ಸುಮಾರು 7 ದಿನಗಳ ಕಾಲ ಬೆಂಗಳೂರಿನಲ್ಲಿ ಉಳಿಯುವ ಕಾರ್ಯಕ್ರಮವಿದೆ.
ಕೃಷ್ಣ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಲ್ಲ: ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್. ಆಸ್ಕರ್ ಫರ್ನಾಂಡೀಸ್ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಕೃಷ್ಣ ಅವರು ಸಿಎಂ ಕುರ್ಚಿ ಸಹವಾಸ ಬೇಡ ಎಂದು ಮತ್ತೆ ಮತ್ತೆ ಹೇಳುತ್ತಾ ಬಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಂಜೆ ಅವರ ರಾತ್ರಿ ವೇಳೆಗೆ ಕೃಷ್ಣ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ. ಡಿಕೆ ಶಿವಕುಮಾರ್, ಆರ್ ವಿ ದೇವರಾಜ್, ಎಸ್ ಆರ್ ಪಾಟೀಲ್ ಅವರು ಕೃಷ್ಣ ಅವರ ಅಕ್ಕ ಪಕ್ಕದಲ್ಲಿ ಕಾಣಿಸಿಕೊಂಡರೆ, ನಂತರದ ಸಾಲಿನಲ್ಲಿ ಜಿ ಪರಮೇಶ್ವರ್ ಹಾಗೂ ಆರ್ ವಿ ದೇಶಪಾಂಡೆ ಸೇರಿದಂತೆ ಉಳಿದ ನಾಯಕರು ಇದ್ದರು.
ಒಟ್ಟಿನಲ್ಲಿ ಕೃಷ್ಣ ಆಗಮನದಿಂದ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಂಚಲನ ಮೂಡಿತ್ತು. ಇತರೆ ಪಕ್ಷಗಳ ಮೇಲೆ ಯಾವ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.
ಎಚ್ಡಿಕೆ ಪ್ರತಿಕ್ರಿಯೆ: ಕಾಂಗ್ರೆಸ್ ನೂರು ನಾಯಕರು ಬಂದರೂ ತೊಂದರೆ ಇಲ್ಲ. ಕರ್ನಾಟಕದಲ್ಲಿ ಜೆಡಿಎಸ್ ತನ್ನದೇ ಆದ ಕಾರ್ಯತಂತ್ರ ರೂಪಿಸಿಕೊಂಡು ಹೋರಾಟಕ್ಕೆ ಇಳಿದಿದೆ. ಎಸ್ ಎಂ ಕೃಷ್ಣ ಅವರ ಜೊತೆಗೆ ನೂರು ನಾಯಕರು ಬಂದರೂ ನಮ್ಮ ಪಕ್ಷಕ್ಕೆ ತೊಂದರೆ, ಬಾಧಕವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.