ಯಾದಗಿರಿಯಲ್ಲಿ ಕನ್ನಡ ಧ್ವಜಕ್ಕೆ ಮತ್ತೆ ಅವಮಾನ
ಇದು ನಡೆದಿರುವ ಯಾದಗಿರಿ ಕೇಂದ್ರ ಬಸ್ ನಿಲ್ದಾಣದ ಮುಂದೆ. ಕಲ್ಯಾಣ ಕರ್ನಾಟಕ ಯುವ ಸೇನೆ ಕಾರ್ಯಕರ್ತರು, ಕೆಂಪು ಮೇಲೆ ಹಳದಿ ಬಣ್ಣವನ್ನು ಕೆಳಗೆ ಮಾಡಿ ಕನ್ನಡ ಧ್ವಜವನ್ನು ಹಾರಿಸಿ ಅವಮಾನ ಮಾಡಿದ್ದಾರೆ. ಇದು ಬೇಕಂತೆ ಮಾಡಿದ್ದೋ, ತಿಳಿಯದೆಯೆ ಮಾಡಿದ್ದೋ, ಅಂತೂ ಕನ್ನಡ ಧ್ವಜಕ್ಕೆ 57ನೇ ಕನ್ನಡ ರಾಜ್ಯೋತ್ಸವದಂದು ಅವಮರ್ಯಾದೆಯಾಗಿದೆ.
ನಗರದ ಹೃದಯ ಭಾಗದಲ್ಲಿಯೇ ಈ ಘಟನೆ ನಡೆದಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ನೋಡಿದ ಸಾರ್ವಜನಿಕರು ಕನ್ನಡಕ್ಕೆ ಅವಮಾನ ಮಾಡಿದವರನ್ನು ಶಿಕ್ಷಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವಲ್ಪ ಸಮಯದ ನಂತರ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಬಂದು ಉಲ್ಟಾಪುಲ್ಟಾ ಹಾರುತ್ತಿದ್ದ ಧ್ವಜವನ್ನು ಸರಿಮಾಡಿ ಮತ್ತೆ ಹಾರಿಸಿದರು.
ಬಾವುಟ ಹಾರಿಸುವ ಸಂದರ್ಭದಲ್ಲಿ ಯಾರಾದರೂ ಇದನ್ನು ಗಮನಿಸಿ ಕೂಡಲೆ ಸರಿಪಡಿಸಬೇಕಿತ್ತು. ಆದರೆ, ಅದನ್ನು ಯಾರೂ ಮಾಡಲು ಹೋಗಿಲ್ಲ. ಕನ್ನಡ ಧ್ವಜ ಕರ್ನಾಟಕದ ಅಧಿಕೃತ ಧ್ವಜ ಎಂಬ ವಾದಕ್ಕೆ ಕರ್ನಾಟಕ ಹೈಕೋರ್ಟ್ ಸಮ್ಮತಿ ನೀಡಿಲ್ಲ, ಕನ್ನಡ ಧ್ವಜವನ್ನು ಕಡ್ಡಾಯವಾಗಿ ಎಲ್ಲೆಡೆ ಹಾರಿಸಬೇಕು ಎಂಬ ಬೇಡಿಕೆಗೆ ಒಪ್ಪಿಗೆಯೂ ಸಿಕ್ಕಿಲ್ಲ. ಆದರೆ, ಸ್ವಇಚ್ಛೆಯಿಂದ ಹಾರಿಸುವಾಗಲಾದರೂ ಹೇಗೆ ಹಾರಿಸಬೇಕು ಎಂಬ ಅರಿವಾದರೂ ಇರಬೇಕಲ್ಲ ಎಂದು ಯಾದಗಿರಿಯ ಹಿರಿಯ ನಾಗರಿಕ ಸಂಗಮೇಶ್ ಪಾಟೀಲ ಅವರು ವಾದ ಮಂಡಿಸುತ್ತಾರೆ.