ಬಿಎಸ್ವೈ ಚಕ್ರಸುಳಿಯಲ್ಲಿ ಬಿಜೆಪಿ: ಈಶ್ವರಪ್ಪ ಆತಂಕವೇನು?
ಬೆಂಗಳೂರು, ಅ. 27: ಮುಖ್ಯಮಂತ್ರಿ ಅಥವಾ ರಾಜ್ಯಾಧ್ಯಕ್ಷ ಪಟ್ಟ ಕೊಟ್ಟಾದರೂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಕೆ ಎಸ್ ಈಶ್ವರಪ್ಪ ದಿಢೀರನೆ ರಾಗ ಬದಲಿಸಲು ಕಾರಣವಾಗಿರುವುದಾದರೂ ಏನು?
'ಯಾರು ಬೇಕಾದರೂ ಪಕ್ಷ ಬಿಟ್ಟು ಹೋಗಲಿ; ನಮ್ಮದೇನೂ ಅಭ್ಯಂತರವಿಲ್ಲ' ಎಂದು ಇತ್ತೀಚೆಗೆ ಒಂದೇ ಸಮನೆ ಪಲುಕುತ್ತಿದ್ದ ಈಶ್ವರಪ್ಪ ಹೀಗೆ ಇದ್ದಕ್ಕಿದ್ದಂತೆ ಶೀರ್ಷಾಸನ ಹಾಕುವುದಕ್ಕೆ ಕಾರಣವಾಗಿರುವುದಾದರೂ ಏನು? ಎಂದು ಬಿಜೆಪಿ ಕಾರ್ಯಕರ್ತರು ಗೊಂದಲದ ಗೂಡಿಗೆ ನುಸುಳಿದ್ದಾರೆ. ಅಥವಾ ಇಂತಹ ಗೊಂದಲ ಸೃಷ್ಟಿಸುವುದೇ ಬಿಜೆಪಿ ಹಿರಿಯ ತಲೆಗಳ ತಂತ್ರವಾಗಿದೆಯಾ?
ಯಡಿಯೂರಪ್ಪ ಪಕ್ಷ ಬಿಡುವ ವಿಷಯದಲ್ಲಿ ಬಿಜೆಪಿಯ ನಿಲುವು ಬದಲಾಗುವುದಕ್ಕೆ 4 ಕಾರಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ದುರ್ದೈವವೆಂದರೆ ಆ ಮೂರು ಮಾರ್ಗಗಳ ತಾತ್ಪರ್ಯ ಅಧಿಕಾರಕ್ಕಾಗಿ ನಡೆದಿರುವ ಹಪಾಹಪಿ ಎಂಬುದು ಬೇಸರದ ಸಂಗತಿಯಾಗಿದೆ.
ನಾಲ್ಕು ಕಾರಣಗಳು ಹೀಗಿವೆ: ಅರವಿಂದ ಕೇಜ್ರಿವಾಲಾ ಎಂಬ ಬಡಪಾಯಿಯು ಗಡ್ಕರಿ ಮಹಾಭ್ರಷ್ಟ ಎಂದು ಇಡೀ ಜಗತ್ತಿಗೆ ಕೇಳಿಸುವಂತೆ ಹೇಳಿದ್ದು. ನಂತರ, ಗಡ್ಕರಿ ರಸ್ತೆ ಬದಿಗೆ ಸರಿಯುವ ಮೂಲಕ ನರೇಂದ್ರ ಮೋದಿಗೆ ಪ್ರಧಾನಿ ರಾಜಮಾರ್ಗವನ್ನು ಸುಲಭೀಕರಿಸುವ ಆತಂಕ. ಮತ್ತೊಂದು ಸಮೀಪದಲ್ಲೇ ಇರುವ ಜಗದೀಶ್ ಶೆಟ್ಟರ್ ಸರಕಾರ. ಕೊನೆಯದು ದಿಢೀರನೆ ಉದ್ಭವಿಸಿದ ಎಸ್ ಎಂ ಕೃಷ್ಣ ಫ್ಯಾಕ್ಟರ್.
ಶೆಟ್ಟರ್ ಸರಕಾರ ಬಚಾವೋ ಆಂದೋಲನ
4.ತಕ್ಷಣಕ್ಕೆ ಬಿಜೆಪಿಗೆ ಇದು ಅತ್ಯಗತ್ಯವಾಗಿದೆ. ಬಜೆಪಿಯೂ ಭ್ರಷ್ಟಾಚಾರದಿಂದ ಹಿರತಲ್ಲ ಎಂಬುದು ಸ್ಪಷ್ಟವಾಗುತ್ತಿರುವ ಈ ಘಳಿಗೆಯಲ್ಲಿ ಮತದಾರನಿಗೆ ಮುಖ ತೋರಿಸಲು ಯಾವೊಬ್ಬ ನಾಯಕನಿಗೂ ಧೈರ್ಯವಿಲ್ಲ. ಹಾಗಾಗಿ ಚುನಾವಣೆ ನಿಗದಿಯಂತೆ ಮಾರ್ಚ್ ವೇಳೆಗೆ ನಡೆಯಲಿ ಎಂಬ ದೂರಾಶಯ.
ಯಡಿಯೂರಪ್ಪನವರು ನಿನ್ನೆ ತಮ್ಮ ಬೆಂಬಲಿಗ ಸಚಿವರು/ಶಾಸಕರ ಸಭೆ ಕರೆದು, ಅವರನ್ನೆಲ್ಲ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಬಿಸಾಕಿ ತಮ್ಮ ಹಿಂದೆ ಬರುವಂತೆ ತಾಕೀತು ಮಾಡಿದ್ದಾರೆ. ಅಲ್ಲಿಗೆ ಶೆಟ್ಟರ್ ಸರಕಾರಕ್ಕೆ ಅಪಾಯ ಎದುರಾಗಿದೆ ಎಂಬ ಗಂಭೀರ ಸಂದೇಶ ಹೊರಬಿದ್ದಿದೆ.
ಹಾಗಾಗಿಯೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಡಿಸಿಎಂ ಅಶೋಕ್ ಅವರನ್ನೂ ಜತೆಯಾಗಿಸಿಕೊಂಡು ಡಾಲರ್ಸ್ ಕಾಲನಿಗೆ ದೌಡಾಯಿಸಿರುವುದು. ತಾವು ಪಕ್ಷ ತೊರೆಯುವುದೂ ಬೇಡ. ಮತ್ತೊಮ್ಮೆ ಸರಕಾರವನ್ನು ಬದಲಾಯಿಸೋದು ಬೇಡವೆಂದು ಇಬ್ಬರೂ ನಾಯಕರು ಯಡಿಯೂರಪ್ಪಗೆ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮಾರ್ಗದಲ್ಲಿರುವ ಮೋದಿ ಭಯ:
3. ಸದ್ಯಕ್ಕೆ ನರೇಂದ್ರ ಮೋದಿಯೇ ಬಿಜೆಪಿಯ face ಆಗಿದ್ದಾರೆ. ಇನ್ನು ಇದೇ ಮೋದಿ ಯಡಿಯೂರಪ್ಪಗೂ ಹತ್ತಿರ. ನಾಳೆ ಮೋದಿ ಹ್ಯಾಟ್ರಿಕ್ ಬಾರಿಸಿ, ಪ್ರಧಾನಿ ಪಟ್ಟಕ್ಕೂ ಲಗ್ಗೆ ಹಾಕಿದರೆ ಯಡಿಯೂರಪ್ಪ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ಸರ್ವಜ್ಞ ಎಂಬ ಸರಳ ಲೆಕ್ಕಾಚಾರಕ್ಕೆ ಬಂದಿರುವ ಬಿಜೆಪಿ ವಂಧಿಮಾಗದರು ಯಡಿಯೂರಪ್ಪಗೆ ಮೂಗುದಾರ ತೂರಿಸಲು ಪಟ್ಟು ಹಾಕುತ್ತಿದ್ದಾರಾ ಎಂದು ಯಡಿಯೂರಪ್ಪ ಬಣದ ನಾಯಕರು ಪ್ರಶ್ನಿಸಿಕೊಳ್ಳುತ್ತಿದ್ದಾರೆ.
'ಭ್ರಷ್ಟ' ಗಡ್ಕರಿಯ ನಡುಕ:
2.ಇದು ಸದ್ಯಕ್ಕೆ ಬಿಜೆಪಿಗೆ ದೊಡ್ಡ ತಲೆನೋವಾಗಿದೆ ಎನ್ನುವುದಕ್ಕಿಂತ ಯಡಿಯೂರಪ್ಪ ಇದನ್ನು ಪ್ರಧಾನ ಅಸ್ತ್ರವಾಗಿಸಿಕೊಳ್ಳುತ್ತಾರೆ ಎಂಬುದು ಬಿಜೆಪಿಗೆ ದೊಡ್ಡ ದುಃಖವಾಗಿದೆ. ತನ್ನ ಮೇಲೆ ಸುಖಾಸುಮ್ಮನೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗ ಕೆಲ ಹಿರಿಯ ತಲೆಗಳ ಆಣತಿಯಂತೆ ತನ್ನನ್ನು ಅಧಿಕಾರದಿಂದ ಉರುಳಿಸಿದ್ದು ಇದೇ ಗಡ್ಕರಿ ಮಹಾಶಯ. ಹಾಗೆ ನೋಡಿದರೆ ತನ್ನನ್ನು ಉಳಿಸಿಕೊಳ್ಳಬೇಕಿತ್ತು. ನನ್ನ-ಅವರ ಸಂಬಂಧ ಅಷ್ಟು ಗಟ್ಟಿಯಾಗಿತ್ತು. ಆದರೂ ಕೈಕೊಟ್ಟರು.
ಈಗ ಅದೇ ಗಡ್ಕರಿ ವಿರುದ್ಧ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿವೆ. ಈಗೇನು ಮಾಡುತ್ತೀರಿ ಎಂದು ಯಡಿಯೂರಪ್ಪ ಊರೂರಿಗೂ ಹೋಗಿ ಡಂಗುರ ಸಾರಿಕೊಂಡು ಬಂದರೆ ಬಿಜೆಪಿ ಹೈಕಮಾಂಡ್ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಎಂಬುದು ಬಿಜೆಪಿ ಎಣಿಕೆಯಾಗಿದೆ. ಯಡಿಯೂರಪ್ಪಗೆ ಆ ಅವಕಾಶ ನೀಡಬಾರದು ಅಂದರೆ ಅವರನ್ನು ಪಕ್ಷದಲ್ಲೇ ಕಟ್ಟಿ ಹಾಕಬೇಕು ಎಂಬ ನಿರ್ಧಾರಕ್ಕೆ ಬಂದ ಟೀಂ ಈಶ್ವರಪ್ಪ ಹೊಸ ರಾಗ ಹಾಡುತ್ತಿದ್ದಾರೆ.
ಕೇಂದ್ರಕ್ಕೆ ಕೃಷ್ಣ ರಾಜೀನಾಮೆ ನೀಡಿರುವುದು
1. ಎಸ್ ಎಂ ಕೃಷ್ಣ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ರಾಜ್ಯ ಬಿಜೆಪಿಯಲ್ಲಿ ತಳಮಳವನ್ನುಂಟುಮಾಡಿದೆ. ಎಸ್ ಎಂ ಕೃಷ್ಣ ರಾಜ್ಯ ರಾಜಕೀಯಕ್ಕೆ ಮರಳಿ ಪಾಂಚಜನ್ಯ ಮೊಳಗಿಸಿದರೆ ಮತದಾರ ಬಿಜೆಪಿಯಿಂದ ವಿಮುಖವಾಗುವುದು ಖಚಿತ ಎಂಬುದು ರಾಜ್ಯ ಬಿಜೆಪಿಗೆ ನಡುಕ ತಂದಿದೆ. ಜತೆಗೆ ಯಡಿಯೂರಪ್ಪ ಕಾಂಗ್ರೆಸ್ ಹೊಸ್ತಿಲಲ್ಲೇ ನಿಂತಿರುವುದು ಬಿಜೆಪಿ ನುಂಗಲಾರದ ತುತ್ತಾಗಿದೆ. ಹಾಗಾಗಿಯೇ ಯಡಿಯೂರಪ್ಪಗೆ ದಿಢೀರನೆ ಮಂಡ್ಯದ ಬೆಣ್ಣೆ ಹಚ್ಚುತ್ತಿರುವುದು.