ಕೃಷ್ಣರನ್ನು ಹಿಂಬಾಲಿಸಿದ ಇನ್ನೂ ಆರು ಸಚಿವರು
ಭಾನುವಾರ, ಅ.28ರಂದು ಸಂಪುಟ ಪುನಾರಚನೆ ನಡೆಯುವುದು ಖಚಿತವಾಗಿದ್ದು, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಮುಕುಲ್ ವಾಸ್ನಿಕ್, ಪ್ರವಾಸೋದ್ಯಮ ಸಚಿವ ಸುಬೋಧ್ ಕಾಂತ್ ಸಹಾಯ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ ಮಹಾದೇವ್ ಖಂಡೇಲಾ, ಗ್ರಾಮೀಣಾಭಿವೃದ್ಧಿ ಸಚಿವೆ ಅಗಾಥಾ ಸಂಗ್ಮಾ, ಅಲ್ಪಸಂಖ್ಯಾತರ ವ್ಯವಹಾರ ಖಾತೆ ಸಹಾಯಕ ಸಚಿವ ವಿನ್ಸೆಂಟ್ ಪಾಲಾ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಎಲ್ಲರ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸ್ವೀಕರಿಸಿದ್ದಾರೆ. ರಾಜೀನಾಮೆ ಸಲ್ಲಿಸುವ ಮುನ್ನ ಪ್ರಧಾನಿಯ ಸಮ್ಮತಿ ಪಡೆದೇ ರಾಜೀನಾಮೆ ಸಲ್ಲಿಸಿದ್ದಾಗಿ ಅಂಬಿಕಾ ಸೋನಿ ತಿಳಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಂಬಿಕಾ, ತಾವು ಮುಂದೆ ಪಕ್ಷಕ್ಕಾಗಿ ದುಡಿಯುವುದಾಗಿ ಹೇಳಿದ್ದಾರೆ. 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಂಡ ಕಟ್ಟಲು ಈ ಕಾಂಗ್ರೆಸ್ ಈ ಕಸರತ್ತು ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಭವನದಲ್ಲಿ ಭಾನುವಾರ 11.30ಕ್ಕೆ ಹೊಸ ಸಚಿವರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಆದರೆ, ಯಾರ್ಯಾರು ಸಂಪುಟ ಸೇರಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ವಾಣಿಜ್ಯ ಮತ್ತು ಉದ್ಯಮ ಸಚಿವ ಆನಂದ್ ಶರ್ಮಾ ಅವರಿಗೆ ವಿದೇಶಾಂಗ ಖಾತೆ ಒಲಿಯಲಿದೆ. ವಿದೇಶಾಂಗ ಖಾತೆ ಕಪಿಲ್ ಸಿಬಲ್ ಅವರಿಗೆ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು.
ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಬಲ ತಂದುಕೊಟ್ಟ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಸಂಪುಟ ಸೇರುವುದು ಖಚಿತವಾಗಿದೆ. ಪಶ್ಚಿಮ ಬಂಗಾಳದ ಸಂಸದ ಎ.ಎಚ್. ಖಾನ್ ಅವರು ಕೂಡ ಸಂಪುಟ ಸೇರುವ ಸಾಧ್ಯತೆಗಳಿವೆ. ಸಂಪುಟವನ್ನು ಸೋನಿಯಾ ಗಾಂಧಿ ಅವರ ಮಗ ರಾಹುಲ್ ಗಾಂಧಿ ಅವರು ಸೇರುತ್ತಾರಾ? ಸಹಾಯಕ ದರ್ಜೆ ಸಚಿವರಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್ ಅವರಿಗೆ ಹೆಚ್ಚಿನ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ.