ಬಕ್ರೀದ್ ಪ್ರಾರ್ಥನೆ ವೇಳೆ ಹೆಜ್ಜೇನು ಹಠಾತ್ ದಾಳಿ
ತಾಲೂಕಿನ ಗಂಜಿಗುಂಟೆ ಗ್ರಾಮದ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಅಲ್ಲಾಹುವಿಗೆ ಸಾರ್ವಜನಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ್ದರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಪ್ರಾರ್ಥನೆ ನಡೆಯುತ್ತಿದ್ದಾಗ ಹಠಾತ್ತನೆ 150ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ. ದಾಳಿಗೆ ಹೆದರಿ ಮುಸ್ಲಿಂ ಬಾಂಧವರು ಪ್ರಾರ್ಥನೆಯನ್ನು ಅರ್ಧಕ್ಕೆ ಬಿಟ್ಟು ಎದ್ದುಬಿದ್ದು ಓಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನ ಹಾರಾಟಕ್ಕೂ ಜೇನು ಕಾಟ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ಹಾರಲೆಂದು ನಿಂತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ರೆಕ್ಕೆಗೆ ಜೇನು ಗೂಡು ಕಟ್ಟಿದ್ದರಿಂದ ವಿಮಾನ ಆಗಸಕ್ಕೆ ನೆಗೆಯುವುದು 45 ನಿಮಿಷ ವಿಳಂಬವಾಯಿತು. ಈ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು ಗೂಡನ್ನು ತೆಗೆದ ನಂತರ ವಿಮಾನ ಹಾರಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ಸಂಜೆಯೇ ದುಬೈನಿಂದ ವಿಮಾನ ಬಂದು ನಿಂತಿತ್ತು. 14 ಗಂಟೆಗಳ ಕಾಲ ಇಡೀ ರಾತ್ರಿ ಅಲ್ಲೇ ನಿಂತಿದ್ದರಿಂದ ಒಂದು ರೆಕ್ಕೆಯ ಮೇಲೆ ಜೇನು ಮನೆ ಕಟ್ಟಿ ಸಂಸಾರ ಹೂಡಿದ್ದವು. ಇದು ವಿಮಾನ ಹಾರಾಟಕ್ಕೆ ಕೆಲವೇ ನಿಮಿಷಗಳಿರುವಾಗ ಗಮನಕ್ಕೆ ಬಂದಿದೆ. ಗೂಡನ್ನು ನಿವಾರಿಸಿದ ನಂತರ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಲಾಗಿದೆ.