ಕೇಂದ್ರ ಸಚಿವ ಸಂಪುಟದಿಂದ ಎಸ್ ಎಂ ಕೃಷ್ಣಗೆ ಕೊಕ್?
ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ಎದುರಾಗಲಿದ್ದು ರಾಜ್ಯದಲ್ಲಿ ತಮ್ಮದೇ ಆದ ವರ್ಚಸ್ಸು ಇರುವ ಕೃಷ್ಣ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ ಎಂದು ಸಿಎನ್ಎನ್ - ಐಬಿಎನ್ ವರದಿ ಮಾಡಿದೆ.
ಆದರೆ ಯುವರಾಜ ರಾಹುಲ್ ಗಾಂಧಿಯವರ ಸಂಪುಟ ಸೇರ್ಪಡೆ ಬಗ್ಗೆ ಸಸ್ಪೆನ್ಸ್ ಹಾಗೇ ಮುಂದುವರಿದಿದೆ. ಕಾಂಗ್ರೆಸ್ ಪಕ್ಷದ ಸಚಿವರುಗಳಾದ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಸಚಿನ್ ಪೈಲಟ್ ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು ಎಂದು ಸಿಎನ್ ಎನ್ ಸುಳಿವು ನೀಡಿದೆ.
ಹಗರಣದಲ್ಲಿ ಸಿಲುಕಿರುವ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಸುಭೋದ್ ಕಾಂತ್ ಸಹಾಯ್, ಬೇನಿ ಪ್ರಸಾದ್ ವರ್ಮಾ ಮತ್ತು ಅಂಬಿಕಾ ಸೋನಿಯವರನ್ನು ಅವರನ್ನು ಸಂಪುಟದಿಂದ ಕೈಬಿಡಲಾಗುವುದು.
ಕ್ರೀಡಾ ಸಚಿವ ಅಜಯ್ ಮೇಕನ್ ಮತ್ತು ಪರಿಸರ ಸಚಿವೆ ಜಯಂತಿ ನಟರಾಜನ್ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದೂ ಐಬಿಎನ್ ಪ್ರಕಟಿಸಿದೆ.
ಅಲ್ಲದೆ ಚಿರಂಜೀವಿ, ದೀಪಾ ದಾಸ್ ಮುನ್ಸಿ, ಮನೀಶ್ ತಿವಾರಿ ಅವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಹೆಚ್ಚುವರಿ ಖಾತೆಯನ್ನು ಹೊಂದಿರುವ ವೀರಪ್ಪ ಮೊಯ್ಲಿ, ಕಪಿಲ್ ಸಿಬಲ್ ಮತ್ತು ಸಲ್ಮಾನ್ ಖುರ್ಷಿದ್ ಅವರಿಗೆ ಒಂದು ಖಾತೆಯ ಜವಾಬ್ದಾರಿಯನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ.