ಜೀವ ಬೆದರಿಕೆ ಕೇಸ್ : ರೆಡ್ಡಿಗೆ ನಿರೀಕ್ಷಣಾ ಜಾಮೀನು
ಸಂಡೂರು ವಿಭಾಗದ ಅರಣ್ಯದಲ್ಲಿ ನಡೆಯುತ್ತಿತ್ತು ಎನ್ನಲಾದ ಅಕ್ರಮ ಗಣಿಗಾರಿಕೆಯ ವಿರುದ್ಧ ತನಿಖೆಗೆ ಆಗಮಿಸಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ.ಯು.ವಿ.ಸಿಂಗ್ ಮತ್ತು ತಂಡದವರ ಮೇಲೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಮತ್ತು ನಗರ ಪಾಲಿಕೆ ಸದಸ್ಯ ಕೆ.ಎಸ್.ದಿವಾಕರ್ ಮತ್ತಿತರರಿಗೆ ಬಳ್ಳಾರಿ ನಗರದ ಜಿಲ್ಲಾ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಮೀನು ನೀಡಿದೆ.
ಈ ಬೆದರಿಕೆ ಪ್ರಕರಣದಲ್ಲಿ ಇತ್ತೀಚೆಗೆ ಪೊಲೀಸ್ ಇಲಾಖೆಯು ತನಿಖೆಯನ್ನು ಕೈಗೊಂಡಿತ್ತು. ಸಂಡೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಈ ಆರೋಪ ಪಟ್ಟಿಯ ಆಧಾರದ ಮೇಲೆ ಸಂಡೂರಿನ ಜೆಎಂಎಫ್ಸಿ ನ್ಯಾಯಾಲಯವು ಶಾಸಕ ಸೋಮಶೇಖರ ರೆಡ್ಡಿ ಮತ್ತು ಅವರ 14 ಜನ ಸಹಚರರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.
ಆದರೆ, ಜೆಎಂಎಫ್ ಸಿ ನ್ಯಾಯಾಲಯದ ನ್ಯಾ ಮಾರುತಿ ಶಿವಾನಂದ್ ಜಾಫರೆ ಅವರು ಸೂಕ್ತ ಸಾಕ್ಷ್ಯಾಧಾರವಿಲ್ಲದ ಕಾರಣ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದಾರೆ. 50 ಸಾವಿರ ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ ನೀಡಿ ಜಾಮೀನು ಪಡೆಯುವಂತೆ ಸೂಚಿಸಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಬೇಲೆಕೇರಿ ಅದಿರು ನಾಪತ್ತೆ ಮತ್ತು ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ವಿರುದ್ಧ ತನಿಖೆಯನ್ನು ಸಿಬಿಐ ತಂಡ ತೀವ್ರಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಿಬಿಐ ತಂಡ ಸಲ್ಲಿಸಿ ಬಂದಿದೆ.
ಕಾರವಾರ ಜಿಲ್ಲೆಯ ಬೇಲೆಕೇರಿ ಬಂದರಿನಲ್ಲಿ ಲಕ್ಷಾಂತರ ಟನ್ ಅಕ್ರಮ ಅದಿರು ರಫ್ತುನ್ನು ಕುರಿತು ಸಿಇಸಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಸುಪ್ರೀಂಕೋರ್ಟ್ ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಆರು ವಾರಗಳ ಒಳಗೆ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಿತ್ತು.
ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ಸಿಬಿಐ ತನಿಖಾ ತಂಡ ಬಳ್ಳಾರಿ ನಗರ, ಹೊಸಪೇಟೆ, ಸಂಡೂರು, ಕೊಪ್ಪಳ, ಗದಗ, ಹುಬ್ಬಳ್ಳಿ, ಕಾರವಾರ ಜಿಲ್ಲೆಗಳಲ್ಲಿನ ಗಣಿ ಮಾಲೀಕರು, ಸಾಗಾಣಿಕಾದಾರರು, ಅದಿರು ರಫ್ತು ಕಂಪನಿಗಳು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿಚಾರಣೆ ನಡೆಸಿ 60ಕ್ಕೂ ಹೆಚ್ಚಿನ ಪುಟಗಳ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.
ಬೇಲೇಕೇರಿ ಬಂದರಿನಿಂದ 8 ಲಕ್ಷ ಟನ್ ಗಳಷ್ಟು ಬೃಹತ್ ಪ್ರಮಾಣದ ಅದಿರು ನಾಪತ್ತೆಯಾಗಿತ್ತು. ಅಂದಿನ ಯಡಿಯೂರಪ್ಪ ಸರ್ಕಾರ ನಂತರ ಅದಿರು ರಫ್ತು ನಿಷೇಧಿಸಿದ್ದರು. ರಾಜ್ಯದ ಸುಮಾರು 10 ಬಂದರುಗಳಲ್ಲಿ ಅದಿರು ಸಾಗಾಟ ಸ್ಥಗಿತಗೊಂಡಿತ್ತು.