ಅಂಬಾರಿ ಹೊತ್ತ ಅರ್ಜುನ ಪಂದ್ಯದ ಪುರುಷೋತ್ತಮ
ಎಲ್ಲರ ಕೇಂದ್ರಬಿಂದುವಾಗಿದ್ದ ಚಾಮುಂಡೇಶ್ವರಿ ತಾಯಿಯ ವಿಗ್ರಹವಿರುವ 750 ಕೆಜಿ ಅಂಬಾರಿ ಹೊತ್ತ ಅರ್ಜುನ ಯಶಸ್ವಿಯಾಗಿ ತನಗೆ ವಹಿಸಲಾಗಿದ್ದ ಜವಾಬ್ದಾರಿಯನ್ನು ರಾಜ ಗಾಂಭೀರ್ಯದಿಂದ ನಡೆಸಿ ಕೊಟ್ಟು ಕೃತಾರ್ಥನಾಗಿದ್ದಾನೆ.
'ಡಿ' ಆಕಾರದಲ್ಲಿ ಕಮಾಂಡೋಗಳ ಭದ್ರ ಕಾವಲಿನಲ್ಲಿ ಇದೇ ಮೊದಲ ಬಾರಿಗೆ (ಈ ಹಿಂದೆ ಮೆರವಣಿಗೆಯಿಂದ ವಾಪಾಸ್ ಹೋಗುವಾಗ ಒಂದು ಬಾರಿ ಅಂಬಾರಿ ಹೊತ್ತಿದ್ದ) ಅಂಬಾರಿ ಹೊತ್ತ ಅರ್ಜುನ ಇಂದಿನ ವೈಭವದ ಜಂಬೂಸವಾರಿಯ ಪಂದ್ಯದದ ಪುರುಷೋತ್ತಮನಾಗಿ ಹೊರಹೊಮ್ಮಿದ್ದಾನೆ.
ಗಜೇಂದ್ರ, ಕಾವೇರಿ, ಚೈತ್ರ, ರಾಮ ಆನೆಗಳ ಜೊತೆ ಹೆಜ್ಜೆ ಹಾಕಿದ ಅರ್ಜುನ ಈ ಹಿಂದೆ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮನಿಗಿಂತ ತುಸು ವೇಗವಾಗಿ ಹೆಜ್ಜೆ ಹಾಕಿ ತಾನು ಮುಂಗೋಪಿಯೆನ್ನುವ ಆಪಾದನೆಯನ್ನು ಸುಳ್ಳು ಮಾಡಿದ್ದಾನೆ.
ಬಲರಾಮ ದ್ವಾರದಿಂದ ಆರಂಭವಾದ ಜಂಬೂಸವಾರಿ ಮೆರವಣಿಗೆ ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಸಯ್ಯಾಜಿ ರಾವ್ ರಸ್ತೆ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪಕ್ಕೆ ಸಂಜೆ 6.30ರ ಸುಮಾರಿಗೆ ಬರುವ ಮೂಲಕ ಮೆರವಣಿಗೆ ಮುಕ್ತಾಯಗೊಂಡಿತು.
ಮಧ್ಯಾಹ್ನ 1.50ಕ್ಕೆ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ಸಿನಲ್ಲಿ ಆಗಮಿಸಿದ ಸಿಎಂ ಜಗದೀಶ್ ಶೆಟ್ಟರ್ ಪತ್ನಿ ಸಮೇತ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಡಿಸಿಎಂ ಅಶೋಕ್, ಸಚಿವ ಗೋವಿಂದ ಕಾರಿಜೋಳ, ಸಿ ಎಂ ಉದಾಸಿ, ರಾಮದಾಸ್ ಮತ್ತು ಮೈಸೂರು ಮೇಯರ್ ಉಪಸ್ಥಿತರಿದ್ದರು.
ಮಹಾರಾಜರು ಬಿಟ್ಟು ಹೋದ ವಿಶಿಷ್ಟ ಪರಂಪರೆಯಾದ ದಸಾರಾ ಹಬ್ಬದ ಈ ಮೆರವಣಿಗೆ ವೀಕ್ಷಿಸಲು ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಮೆರವಣಿಗೆ ಸಾಗುವ ಹಾದಿಯಲ್ಲಿ ಕಿಕ್ಕಿರಿದು ಜಮಾಯಿಸಿದ್ದರು. ಸುಮಾರು 4500 ಪೋಲೀಸರನ್ನು ಜಂಬೂಸವಾರಿ ಮೆರವಣಿಗೆಗೆ ನಿಯೋಜಿಸಲಾಗಿತ್ತು.
ಪೂಜಾ ಕುಣಿತ, ಪೋಲೀಸ್ ಬ್ಯಾಂಡ್ ವಾದ್ಯಘೋಷ್ಠಿ, ಡೊಳ್ಳು ಕುಣಿತ, ಮರಗಾಲು ಕುಣಿತ ಮುಂತಾದ 82 ಕಲಾ ತಂಡಗಳು ಮತ್ತು 37 ಸ್ಥಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಜಂಬೂಸವಾರಿ ಮೆರವಣಿಗೆಯ ನಂತರ ಬನ್ನಿ ಮಂಟಪದಲ್ಲಿ ನಡೆಯುತ್ತಿರುವ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ರಾಜ್ಯಪಾಲ ಭಾರದ್ವಾಜ್ ಗೌರವ ವಂದನೆ ಸ್ವೀಕರಿಸುವ ಮೂಲಕ ಚಾಲನೆ ನೀಡಿದ್ದಾರೆ.
ಶಿವಮೂಗ್ಗ: ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆ ಆರಂಭವಾಯಿತು. ಚಾಮುಂಡಿ ತಾಯಿಯ ವಿಗ್ರಹವನ್ನು ಸಾಗರ್ ಆನೆ ಹೊತ್ತಿದೆ. ನಗರಾದ್ಯಂತ ಅತ್ಯಂತ ವೈಭವದಿಂದ ಮೆರವಣಿಗೆ ಸಾಗಿದೆ.
ಮಂಗಳೂರು: ಪ್ರಸಿದ್ದ ಶ್ರೀ.ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ದಸರಾ ಮೆರವಣಿಗೆ ಮಧ್ಯಾಹ್ನ ಆರಂಭವಾಗಿದೆ . ನವದುರ್ಗೆ, ಗಣೇಶ, ಶಾರದೆ, ಆದಿಶಕ್ತಿ, ನಾರಾಯಣಗುರು ಸೇರಿ ನೂರಕ್ಕೂ ಹೆಚ್ಚು ಸ್ಥಬ್ಧ ಚಿತ್ರಗಳು ಅಲ್ಲದೆ 30ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ.
ಸುಮಾರು 8 ಕಿಲೋಮೀಟರ್ ಸಾಗುವ ಈ ಭವ್ಯ ಮೆರವಣಿಗೆಗೆ ನಾಳೆ (ಅ 25) ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ತೆರೆ ಬೀಳಲಿದೆ.
ಮಡಿಕೇರಿ : ರಾತ್ರಿ ಹತ್ತು ಗಂಟೆಯ ನಂತರ ಶೋಭಾಯಾತ್ರೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ನಗರದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಈಗ ನಡೆಯುತ್ತಿದ್ದು, ಶೋಭಾಯಾತ್ರೆ ಮೆರವಣಿಗೆ ಸಮಿತಿ ಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ.