ಜಂಬೂ ಸವಾರಿ ಮೆರವಣಿಗೆಗಿರುವ ಸಣ್ಣ ಮಟ್ಟದ ಆತಂಕ
ಈ ಬಾರಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಯ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿರುವ ಕರಿರಾಜ ಅರ್ಜುನ. ಬಲರಾಮನ ನಿವೃತ್ತಿ ನಂತರ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅರ್ಜುನನಿಗೆ ಮುಂಗಡ ಶುಭಾಶಯಗಳು.
14 ವರ್ಷಗಳ ಕಾಲ ಸತತ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಬಲರಾಮ ಈ ಬಾರಿ ವಯಸ್ಸಾಗಿರುವ ಕಾರಣದಿಂದ ಅಂಬಾರಿ ಹೊರುತ್ತಿಲ್ಲ. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರಮನೆಯ ದ್ವಾರದಿಂದ ಆರಂಭವಾಗಿ ಬನ್ನಿ ಮಂಟಪದವರೆಗೆ ಸುಮಾರು ನಾಲ್ಕು ಕಿಲೋಮೀಟರ್ ಸಾಗುವ ಮೆರವಣಿಗೆಯಲ್ಲಿ ಮೂರುವರೆ ಗಂಟೆಗೂ ಹೆಚ್ಚು ಕಾಲ ಹೊರಬೇಕಾಗುತ್ತದೆ.
ಈ ಬಾರಿಯ ಜಂಬೂ ಸವಾರಿ ಮೆರವಣಿಗೆಗೆ ಇರುವ ಸಣ್ಣ ಆತಂಕವೆಂದರೆ ಅಂಬಾರಿ ಹೊರಲಿರುವ ಅರ್ಜುನ ತುಸು ಮುಂಗೋಪಿ. ಹಿಂದೊಮ್ಮೆ ಸಿಟ್ಟಿನಿಂದ ಮಾವುತನನ್ನು ತಿವಿದು, ತುಳಿದು ಸಾಯಿಸಿದ ಫ್ಲ್ಯಾಶ್ ಬ್ಯಾಕ್ ಅರ್ಜುನನ ಹೆಸರಿನಲ್ಲಿದೆ.
ಈ ಬಾರಿ ಮೆರವಣಿಗೆ ಸಮಿತಿ ಈ ಸಂಬಂಧ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮೆರವಣಿಗೆಯ ಸಮಯದಲ್ಲಿ ಅರ್ಜುನನ ಸಮೀಪ ನುರಿತ ಮಾವುತರನ್ನು ನಿಯೋಜಿಲಾಗುತ್ತದೆ. ಅಲ್ಲದೆ ಅರ್ಜುನನ ತೀರಾ ಸಮೀಪ ಸಾರ್ವಜನಿಕರು ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ.
ಅರ್ಜುನ ಅಂಬಾರಿ ಹೊರುವ ಮೆರವಣಿಗೆ ಸಮಯದಲ್ಲಿ ಆತನ ಸುತ್ತಮುತ್ತ 'ಜೀರೋ ಜೋನ್' ಎಂದು ಜಿಲ್ಲಾಡಳಿತ ಘೋಷಿಸಿದೆ. ಅರ್ಜುನನ ಸಮೀಪ ಪಟಾಕಿ ಸಿಡಿಸುವುದಾಗಲಿ ಅಥವಾ ತೀರ ಶಬ್ದ ಬರದಂತೆ ನಿರ್ಭಂದ ಹೇರಲಾಗುತ್ತದೆ. ಅರ್ಜುನ ಈಗಾಗಲೇ ತಾಲೀಮು ಕೂಡ ನಡೆಸಿದ್ದಾನೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬುಧವಾರ ಮಧ್ಯಾಹ್ನ 1.46 ರಿಂದ 2.14ರ ವರೆಗಿನ ಧನುರ್ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿ ಮೆರವಣಿಗೆ ಚಾಲನೆ ನೀಡುತ್ತಾರೆ.
ತಾಯಿ ಚಾಮುಂಡೇಶ್ವರಿ ಕೃಪಾಕಟಾಕ್ಷದಿಂದ ಕಾರ್ಯಕ್ರಮಗಳು ನಿರ್ವಿಘ್ನವಾಗಿ, ಸಾಂಗವಾಗಿ ನೆರವೇರಲಿ ಎಂದು ಆಶಿಸೋಣ. ಅರ್ಜುನ ಗಜ ಗಾಂಭೀರ್ಯದಿಂದ ಅಂಬಾರಿ ಹೊತ್ತು ಸಾಗಲಿ ಎನ್ನುವುದು ಎಲ್ಲರ ಆಶಯ. ದಸರಾ ಮೆರವಣಿಗೆ ಮುಂತಾದ ಮೈಸೂರಿನ ಇತ್ತೀಚಿನ ಸುದ್ದಿ ಪತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ