ಚಿನ್ನದ ಅಂಬಾರಿ ಹೊತ್ತ ಅರ್ಜುನನಿಗೆ ಕಮಾಂಡೋ ಭದ್ರತೆ
ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯನ್ನು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅರ್ಜುನ ಬರಲಿದ್ದು, ಪುಷ್ಪಾರ್ಚನೆ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎ ರಾಮದಾಸ್ ಹೇಳಿದ್ದಾರೆ. ವಿವಿಧ ಜಿಲ್ಲೆಗಳಿಂದ ಸುಮಾರು 36 ಕ್ಕೂ ಅಧಿಕ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ವಿವಿಧ ಜಾನಪದ ತಂಡಗಳು, ಸಂಗೀತ, ನೃತ್ಯ ತಂಡಗಳು ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪ್ರದರ್ಶಿಸಲಿದೆ.
ಕಳೆದ 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನನಿಗೆ ಈಗ 52 ವರ್ಷ. ಈತನ ಎತ್ತರ 2.80 ಮೀ, ಉದ್ದ 3.75 ಮೀ, 4750 ಕೆ.ಜಿ. ತೂಕವನ್ನು ಹೊಂದಿದ್ದಾನೆ.
1968ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಪಿಟ್ ಮೆಥಡ್ನಿಂದ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತ ಅನುಭವವಿದೆ. ಪ್ರಸ್ತುತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಆನೆ ಶಿಬಿರದಿಂದ ಈತ ಬಂದಿದ್ದು, ದಸರಾ ಮಹೋತ್ಸವದಲ್ಲಿ ಪತಾಕೆ ಆನೆಯ ಜವಾಬ್ದಾರಿ ವಹಿಸಿದ್ದಾನೆ. ಈ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ.
ಚಿನ್ನದ ಅಂಬಾರಿ ಹೊತ್ತು ಬರುವ ಅರ್ಜುನನ ಸುತ್ತ ಕಮಾಂಡೊ ಪಡೆಯ ನಿಯೋಜಿಸಲಾಗಿದೆ. 60 ಮಂದಿ ಕಮಾಂಡೋಗಳು ಎಸ್ ಎಲ್ ಆರ್ ಗನ್ ಗಳನ್ನು ಹಿಡಿದು ಸಾಗಲಿದ್ದಾರೆ.
ಇನ್ನೊಂದು ಪಹರೆಯಲ್ಲಿ 4,500 ಪೊಲೀಸರ ತಂಡ ಸಾಗಲಿದೆ. ಇದರ ಹಿಂದೆ 'ವಿ' ಆಕಾರದಲ್ಲಿ ನಾದಸ್ವರ ತಂಡ ಸಾಗಲಿದೆ. ಮೆರವಣಿಗೆ ಸಾಗುವ ರಸ್ತೆ ಇಕ್ಕೆಡೆಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ ಎಂದು ಮೇಯರ್ ರಾಜೇಶ್ವರಿ ಅವರು ಹೇಳಿದ್ದಾರೆ.
ನಂದಿಧ್ವಜ ಪೂಜೆ : ಮೈಸೂರಿನ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 2012ರ ಅಕ್ಟೋಬರ್ 24 ರಂದು ಮಧ್ಯಾಹ್ನ 1-46 ರಿಂದ 2-14 ಗಂಟೆಯೊಳಗೆ ಮೈಸೂರು ದಸರಾ ಮಹೋತ್ಸವದ ನಂದಿಧ್ವಜ ಪೂಜೆ ನೆರವೇರಿಸುವರು.
ನಂತರ ಅರಮನೆಯ ಒಳಾವರಣದಲ್ಲಿ ವಿಜಯದಶಮಿಯ ಹಾಗೂ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಯ ಉದ್ಘಾಟನೆ ನೆರವೇರಿಸುವರು. ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಆರ್. ಅಶೋಕ್ ಹಾಗೂ ಸಚಿವರುಗಳು, ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿರುವರು. ರಾಜವಂಶಸ್ಥ ಶ್ರೀಕಂಥದತ್ತ ನರಸಿಂಹ ರಾಜ ಒಡೆಯರ್ ಉಪಸ್ಥಿತರಿರುತ್ತಾರೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಂಜೆ 7 ಗಂಟೆಗೆ ಬನ್ನಿಮಂಟಪದ ಬಳಿ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ.