ಹೊಸಪಕ್ಷಕ್ಕೆ ವಿಜಯದಶಮಿ ಶುಭಕಾಲ - ಬಿಎಸ್ವೈ
ವಿಜಯದಶಮಿ (ಅ.24) ಶುಭ ದಿನದಿಂದ ಹೊಸ ಪಕ್ಷದ ಚಟುವಟಿಕೆಗಳು ಆರಂಭವಾಗಲಿವೆ. ಅದು ಹೊಸ ಪರ್ವದ ಆರಂಭದ ಸಂಕೇತವೂ ಆಗಿರತ್ತೆ. ಡಿಸೆಂಬರ್ ನಲ್ಲಿ ಬಿಜೆಪಿ ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತೇನೆ. ತಾಂತ್ರಿಕ ಕಾರಣಗಳಿಂದಾಗಿ ಈಗ ರಾಜೀನಾಮೆ ನೀಡಲು ಸಾಧ್ಯವಾಗುತ್ತಿಲ್ಲ. ನನ್ನ ಬೆಂಬಲಿಗರು ಸರ್ಕಾರದಲ್ಲಿ ಉಳಿಯಬೇಕಿದೆ. ಅವರು ಸೂಕ್ತ ಕಾಲದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದೂ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದರು
ಹೊಸ ಪಕ್ಷ ಸ್ಥಾಪನೆ ಶತಸಿದ್ಧ : ಪಕ್ಷದ ವರಿಷ್ಠರು ನನ್ನ ಮನವೊಲಿಕೆ ಮಾಡುತ್ತಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿ ಜೊತೆ ಸಾಗಲು ಸಾಧ್ಯವಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಅವರ ಹೇಳಿಕೆಗೆ ಯಡಿಯೂರಪ್ಪ ಖಾರವಾಗೇ ಪ್ರತಿಕ್ರಿಯಿಸಿದ್ದಾರೆ. ನಿತಿನ್ ಗಡ್ಕರಿ ಅವರು ಯಡಿಯೂರಪ್ಪನವರ ಬಳಿ ಸಮಾಲೋಚನೆ ನಡೆಸುತ್ತಾರೆಂದು ಜೋಶಿ ಸೋಮವಾರ ಹೇಳಿದ್ದರು.
ಡಿ.10 ಹಾವೇರಿಯಲ್ಲಿ ಹೊಸ ಪಕ್ಷ ಘೋಷಣೆ ಮಾಡಲಾಗುತ್ತದೆ. ಅಸಂಖ್ಯಾತ ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿಜೆಪಿ ತೊರೆಯುವ ಭಯ ಆವರಿಸಿದ್ದರಿಂದ ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.
2011ರ ಏಪ್ರಿಲ್ 28ರಂದು ಪದ್ಮನಾಭ ಪ್ರಸನ್ನಕುಮಾರ್ ಎಂಬುವವರು ಕರ್ನಾಟಕ ಜನತಾ ಪಕ್ಷ (KJP) ಎಂಬ ಹೊಸ ಪಕ್ಷವನ್ನು ನೋಂದಾಯಿಸಿಕೊಂಡಿದ್ದಾರೆ. ತಮ್ಮ ಪಕ್ಷಕ್ಕೆ ಚಿಹ್ನೆಯಾಗಿ ಸೈಕಲ್ ಗುರುತನ್ನೂ ಪಡೆದಿದ್ದಾರೆ. ಇದನ್ನೇ ಯಡಿಯೂರಪ್ಪ ಅವರು ಈಗ ಅಧಿಕೃತವಾಗಿ ತಮ್ಮ ಪಕ್ಷವನ್ನಾಗಿ ಘೋಷಿಸಲಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಭಾಗದಲ್ಲಿ ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಿದ್ದರಿಂದ ಜನಮಾನಸದಲ್ಲಿ 'ಯಡಿಯೂರಪ್ಪ ಸೈಕಲ್' ಇನ್ನೂ ಭದ್ರವಾಗಿ ಕುಳಿತಿದೆ. ಹಾಗಾಗಿ ಯಡಿಯೂರಪ್ಪನವರು ಸೈಕಲ್ ಗುರುತನ್ನೇ ಉಪಯೋಗಿಸಿದರೆ ಆಶ್ಚರ್ಯವಿಲ್ಲ.