ಬಗರ್ ಹುಕುಂ: ಆರ್ ಅಶೋಕ್ ಮೇಲೆ ಎಫ್ ಐಆರ್
ಬೆಂಗಳೂರು, ಅ.22: ಮೇಯರ್ ಡಿ. ವೆಂಕಟೇಶ್ ಮೂರ್ತಿ ಅವರಿಗೆ ಅಕ್ರಮವಾಗಿ ಬಗರ್ ಹುಕುಂ ಜಮೀನು ಮಂಜೂರು ಆರೋಪ ಹೊತ್ತಿರುವ ಉಪಮುಖ್ಯಮಂತ್ರಿ ಆರ್ ಅಶೋಕ್ ವಿರುದ್ಧ ಬಿಎಂಟಿಎಫ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಗೃಹ ಸಚಿವರೂ ಆಗಿರುವ ಅಶೋಕ್ ಅವರ ಅಡಿಯಲ್ಲಿ ಬರುವ ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್) ಪೊಲೀಸರು ತಮ್ಮ ಇಲಾಖೆ ಸಚಿವರ ವಿರುದ್ಧವೇ ಪ್ರಥಮ ಮಾಹಿತಿ ವರದಿ(ಎಫ್ ಐಆರ್) ದಾಖಲಿಸಿರುವುದು ಕುತೂಹಲಕಾರಿಯಾಗಿದೆ.
ಕೇಸ್ ಹಿಸ್ಟರಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಡಿ. ವೆಂಕಟೇಶ್ ಮೂರ್ತಿ ಅವರು ಬುಧವಾರ(ಸೆ.5, 2012) ಹೈಕೋರ್ಟ್ ಶುಭ ಸುದ್ದಿ ಕೊಟ್ಟಿದೆ. ಅಕ್ರಮವಾಗಿ ಜಮೀನು ಪಡೆದ ಆರೋಪ ಹೊರೆಸಿ ಬಿಎಂಟಿಎಫ್ ದಾಖಲಿಸಿರುವ ಪ್ರಕರಣಕ್ಕೆ ಹೈಕೋರ್ಟ್ ಏಕ ಸದಸ್ಯ ಪೀಠ ತಡೆ ನೀಡಿ ಆದೇಶ ಹೊರಡಿಸಿತ್ತು.
ಮೇಯರ್ ಅವರು ಸುಳ್ಳು ದಾಖಲೆ ಸಲ್ಲಿಸಿ ಜಮೀನು ಪಡೆದಿದ್ದಾರೆ ಎಂದು ಬಿಎಂಟಿಎಫ್ ನ ಮುಖ್ಯಸ್ಥ ಆರ್ ಪಿ ಶರ್ಮ ಅವರು ಮೇಯರ್ ವೆಂಕಟೇಶ್ ಮೂರ್ತಿ ಹಾಗೂ ಅವರ ಪತ್ನಿ ಪ್ರಭಾ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಎಂಎಂ ನ್ಯಾಯಾಲಯದಲ್ಲಿ ಮೇಯರ್ ದಂಪತಿ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಅದರೆ, ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವ ಆರ್ ಅಶೋಕ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಬಿಬಿಎಂಪಿ ಅಕ್ರಮಗಳನ್ನು ಬಯಲಿಗೆಳೆದು ಬಿಬಿಎಂಪಿ ಸದಸ್ಯರಿಗೆ ಸಿಂಹಸ್ವಪ್ನವಾಗಿರುವ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಟ್ ಪೋರ್ಸ್(ಬಿಎಂಟಿಎಫ್) ಗೃಹ ಸಚಿವರು ಖುದ್ದು ಹಾಜರಾಗಿ ಸಾಕ್ಷಿ ಹೇಳುವಂತೆ ಸೂಚಿಸಿತ್ತು. ಅದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಆರ್ ಅಶೋಕ್, ನನಗೆ ಇನ್ನೂ ನೋಟಿಸ್ ಸಿಕ್ಕಿಲ್ಲ. ನೋಟಿಸ್ ಗೆ ತಕ್ಕ ಉತ್ತರ ನೀಡುವೆ. ನಾನು ಯಾವುದೇ ಕಾನೂನು ಉಲ್ಲಂಘನೆ ಮಾಡಿ ಜಮೀನು ಪಡೆದಿಲ್ಲ ಎಂದಿದ್ದರು.
ಪ್ರಕರಣದ ಹಿನ್ನೆಲೆ: ಬಗರ್ ಹುಕುಂ ಯೋಜನೆ ಅಡಿಯಲ್ಲಿ 8 ಎಕರೆ ಭೂಮಿಯನ್ನು ಮೇಯರ್ ಡಿ. ವೆಂಕಟೇಶ್ ಮೂರ್ತಿ ಅವರಿಗೆ ಆರ್ ಅಶೋಕ್ ಅವರು ಮಂಜೂರು ಮಾಡಿದ ಆರೋಪದ ಮೇಲೆ ಬಿಎಂಟಿಎಫ್ ಅಧ್ಯಕ್ಷ ಆರ್ ಪಿ ಶರ್ಮ ನೋಟಿಸ್ ಜಾರಿ ಮಾಡಿದ್ದರು.
2004ರಲ್ಲಿ ಉತ್ತರಹಳ್ಳಿ ಕ್ಷೇತ್ರದ ಶಾಸಕರಾಗಿದ್ದ ಆರ್ ಅಶೋಕ್ ಅವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಹಾಲಿ ಮೇಯರ್ ಆಗಿರುವ ವೆಂಕಟೇಶ್ ಮೂರ್ತಿ ಹಾಗೂ ಅವರ ಪತ್ನಿಗೆ ಉತ್ತರ ಹಳ್ಳಿ ಸಮೀಪದ ಸುಮನಹಳ್ಳಿಯಲ್ಲಿ 8 ಎಕರೆ ಜಮೀನನ್ನು ಅಶೋಕ್ ಮಂಜೂರು ಮಾಡಿದ್ದರು.
ಸಾಮಾನ್ಯವಾಗಿ ಬಗರ್ ಹುಕುಂ ಜಮೀನನ್ನು ಆರ್ಥಿಕವಾಗಿ ಹಿಂದುಳಿದ ಹಾಗೂ ಬಡತನದ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಅದರೆ, ಮೇಯರ್ ವೆಂಕಟೇಶ್ ಮೂರ್ತಿ ಅವರು 2004ರಲ್ಲಿ ಸರ್ಕಾರಕ್ಕೆ ಸುಳ್ಳು ದಾಖಲಾತಿ ನೀಡಿ ಜಮೀನು ಪಡೆದಿದ್ದರು ಎಂದು ಆರೋಪಿಸಲಾಗಿದೆ.