ನಾನಂತೂ ಯಡಿಯೂರಪ್ಪಗೆ ಕೈಕೊಡಲ್ಲಾ, ಬೊಮ್ಮಾಯಿ
ನನ್ನ ಮತ್ತು ಯಡಿಯೂರಪ್ಪ ನಡುವಿನ ಸಂಬಂಧ ಹಳಸಿದೆ ಎನ್ನುವ ಸುದ್ದಿ ಸುಳ್ಳು. ರಾಜಕೀಯದಲ್ಲಿ ಈ ಮಟ್ಟದಲ್ಲಿ ನಾನು ಬೆಳೆಯಲು ಅವರೇ ಕಾರಣ. ನಾನು ಅವರ ಜೊತೆಗೆ ಇರುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ.
ಹಾವೇರಿಯಲ್ಲಿ ಡಿಸೆಂಬರ್ 10ರಂದು ಯಡಿಯೂರಪ್ಪ ಆಯೋಜಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವ ಬಗ್ಗೆ ಶೆಟ್ಟರ್, ಉದಾಸಿ ಅವರ ಜೊತೆ ಮಾತುಕತೆ ನಡೆಸಿ ನಿರ್ಧಾರ ತೆಗೆದು ಕೊಳ್ಳುತ್ತೇನೆ.
ಕಾವೇರಿ ನದಿ ಹಂಚಿಕೆ ವಿಚಾರದ ಸಂಬಂಧ ಸಭೆ ಕರೆದಿದ್ದರಿಂದ ಹುಬ್ಬಳ್ಳಿಯಲ್ಲಿ ನಡೆದ ಯುವ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಬೊಮ್ಮಾಯಿ ಹೇಳಿದ್ದಾರೆ.
ಯಡಿಯೂರಪ್ಪನವರ ಜೊತೆ ಯಾರು ಯಾರು ಇದ್ದಾರೆ ಎನ್ನುವ ಮಾಹಿತಿ ನನಗಿಲ್ಲ. ಯಡಿಯೂರಪ್ಪನವರು ಬಿಜೆಪಿಯಲ್ಲೇ ಮುಂದುವರಿಯ ಬೇಕೆನ್ನುವುದು ನಾನು ಸೇರಿ ಬಿಜೆಪಿ ಕಾರ್ಯಕರ್ತರ ಆಶಯ.
ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರೇ ಮುಖ್ಯ ಕಾರಣ ಎನ್ನುವುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬಿಎಸ್ವೈ ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳ ಬೇಕೆನ್ನುವುದು ಪಕ್ಷದ ವರಿಷ್ಟರ ವಿವೇಚನೆಗೆ ಬಿಟ್ಟಿದ್ದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಯಡಿಯೂರಪ್ಪ ಒಬ್ಬ ಜನನಾಯಕ ಎನ್ನುವುದುರಲ್ಲಿ ಎರಡು ಮಾತಿಲ್ಲ. ಅವರು ಬಿಜೆಪಿಯಲ್ಲಿ ಮುಂದುವರಿದು ಅವರ ನಾಯಕತ್ವದಲ್ಲಿ ಚುನಾವಣಾ ಎದುರಿಸಿದರೆ ವಿರೋಧಿಗಳು ಧೂಳೀಪಟ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.