ಹಾಸನದ ಐಐಟಿ ಕನಸು ನುಚ್ಚು ನೂರಾಗಿದ್ದು ಹೇಗೆ?
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಗಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ಕೂಡಾ ಮುಗಿದು ಇನ್ನೇನೂ ಶಂಕುಸ್ಥಾಪನೆ ಆಗಲಿದೆ ಎಂದು ನಂಬಿಕೊಂಡಿದ್ದ ರೈತರು ಕಂಗಾಲಾಗಿದ್ದಾರೆ.
ಹಾಸನದಲ್ಲಿ ಐಐಟಿ ಸ್ಥಾಪನೆಗಾಗಿ ಕಳೆದ ಅಗಸ್ಟ್ 2012 ಉನ್ನತ ಶಿಕ್ಷಣ ಸಚಿವ ಸಿಟಿ ರವಿ ಅವರು ಕಪಿಲ್ ಸಿಬಲ್ ಅವರ ಬಳಿ ತೆರಳಿ ಮನವಿ ಸಲ್ಲಿಸಿದ್ದರು. ಬಹುತೇಕ ಹಾಸನದ ಕಡೆಗೆ ಐಐಟಿ ಬರುವ ಸೂಚನೆ ಇತ್ತು.
ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಐಐಟಿಗಾಗಿ ಹಾಸನದಲ್ಲಿ 1057 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಯಿತು.
ಬಸ್ತೇನಹಳ್ಳಿ, ಕಸ್ತೂರವಳ್ಳಿ, ಗವೇನಹಳ್ಳಿ, ಆಡುವಳ್ಳಿ ಸೇರಿದಂತೆ ಒಟ್ಟು 8 ಹಳ್ಳಿಗಳ ರೈತರು ಸಾವಿರಾರು ಎಕರೆ ನೀಡಿದ್ದರು. ರೈತರಿಗೆ 15 ಲಕ್ಷ ರು.ನಿಂದ 25 ಲಕ್ಷ ರು ಪರಿಹಾರದ ಭರವಸೆ ನೀಡಲಾಗಿತ್ತು.
ಈಗ ಸುಮಾರು 5 ವರ್ಷ ಕಾಯಿಸಿದ ನಂತರ ಸರ್ಕಾರ ಹಾಸನದ ಬದಲಿಗೆ ರಾಯಚೂರಿನತ್ತ ಐಐಟಿ ಕರೆದೊಯ್ದಿದೆ.
5 ವರ್ಷ ಹಿಂದೆ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ವಾಪಸ್ ಕೊಡಿ ಇಲ್ಲದಿದ್ದರೆ ಈಗಿನ ಮಾರುಕಟ್ಟೆ ಬೆಲೆ ಕೊಡಿ ಎಂದು ಭೂಮಾಲೀಕರು ಆಗ್ರಹಿಸಿದ್ದಾರೆ.
ಈಗ ಭೂಮಿ ಬೆಲೆ ದುಪ್ಪಟ್ಟಾಗಿದೆ. ಭೂ ಸ್ವಾದೀನ ಮಾಡಿಕೊಂಡ ಮೇಲೆ ನಮಗೆ ಯಾವುದೇ ಹಣ ಸಿಕ್ಕಿಲ್ಲ. ಭೂಮಿಯ ಮೇಲೆ ಸಾಲಸೌಲಭ್ಯ ಪಡೆಯುವ ಸೌಲಭ್ಯವೂ ಸಿಕ್ಕಿಲ್ಲ. ಸರ್ಕಾರದ ರಾಜಕೀಯ ಆಟಕ್ಕೆ ನಮ್ಮನ್ನು ಬಲಿ ಮಾಡಲಾಗಿದೆ ಎಂದು ಭೂ ಮಾಲೀಕರು ಹೇಳಿದ್ದಾರೆ.
ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡ ಕ್ರಮ ಸ್ವಾಗತಾರ್ಹವಾದರೂ, ಹಾಸನಕ್ಕೆ ಐಐಟಿ ಎಂದು ಸ್ಥಳ ಗೊತ್ತು ಮಾಡಿದ ಮೇಲೂ ರಾಯಚೂರಿಗೆ ಐಐಟಿ ಎಂದು ಘೋಷಿಸಿರುವುದು ಎಷ್ಟು ಸರಿ?
ಇದರ ನಡುವೆ ಸರ್ ಎಂ ವಿಶ್ವೇಶ್ವರಯ್ಯ ಅವರ ಊರು ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆಗೆ ಒತ್ತಾಯ ಎಂಬ ಕೂಗು ಎದ್ದಿತ್ತು. ನಮ್ಮಲ್ಲಿ ಒಮ್ಮತ ಇಲ್ಲದಿದ್ದರೆ ಕೇಂದ್ರ ಸರ್ಕಾರ ಐಐಟಿ ಮಂಜೂರು ಮಾಡುವುದನ್ನೇ ಮುಂದೂಡಿದರೆ ಅಚ್ಚರಿಯೇನಿಲ್ಲ.