ನೇಪಾಳಿ ಯುವತಿ ಅತ್ಯಾಚಾರಿ ಮೇಲೆ ಗುಂಡಿನ ದಾಳಿ
ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿರುವ ಮೈಕ್ರೋಬಯಾಲಜಿ ವಿಭಾಗದ ಕಟ್ಟಡದ ಹಿಂದೆ ಗಂಧದ ಗಿಡ ಕಡಿದು ಕಳ್ಳತನ ಮಾಡಲು ಬಂದಿದ್ದ ರಾಮ ಎಂಬಾತನೇ ಸಿಕ್ಕಿಬಿದ್ದಿರುವ ಅತ್ಯಾಚಾರ ಆರೋಪಿ. ಆತನ ಜೊತೆ ಗೋಪಿ ಎಂಬಾತನನ್ನೂ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ನೇಪಾಳದ ಯುವತಿಯ ಮೇಲೆ ಅಕ್ಟೋಬರ್ 13ರ ರಾತ್ರಿ ಎಂಟು ಜನರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಆಕೆ ತನ್ನ ಪ್ರಿಯತಮನೊಂದಿಗೆ ಕಾರಿನಲ್ಲಿ ಮಾತನಾಡುತ್ತಿದ್ದಾಗ, ಪ್ರಿಯತಮನನ್ನು ಥಳಿಸಿ ಆಕೆಯನ್ನು ಪೊದೆಯೊಂದರಲ್ಲಿ ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದರು.
ರಾಮ ಅಲ್ಲಿಗೆ ಬರುತ್ತಾನೆಂದು ಸುಳಿವು ದೊರೆತಿದ್ದರಿಂದ ಹೊಂಚುಹಾಕಿ ಕುಳಿತಿದ್ದ ಪೊಲೀಸರು ಅವನನ್ನು ಶರಣಾಗಬೇಕು ಎಂದು ಹೇಳಿದ್ದಾರೆ. ಪ್ರತಿಯಾಗಿ ಆತ ದಾಳಿ ಮಾಡಿ ಓಡಿಹೋಗಲು ಯತ್ನಿಸಿದಾಗ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಗುಂಡು ರಾಮನ ಕಾಲಿಗೆ ಎರಡು ಗುಂಡುಗಳು ತಗುಲಿದ್ದರಿಂದ ಗಾಯಗೊಂಡ ಆತ ಪೊಲೀಸರಿಗೆ ಸಿಕ್ಕುಬಿದ್ದಿದ್ದಾನೆ.
ಕೆಂಗೇರಿ ಠಾಣೆ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಾಲತೇಶ್ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ನೇಪಾಳಿ ಯುವತಿಯ ಅತ್ಯಾಚಾರ ಘಟನೆಯ ಪ್ರಮುಖ ಆರೋಪಿ ರಾಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮ ನಡೆಸಿದ ಪ್ರತಿ ದಾಳಿಗೆ ಓರ್ವ ಪೇದೆ ಕೂಡ ಗಾಯಗೊಂಡಿದ್ದಾರೆ. ಬಂಧಿತ ರಾಮ ಮತ್ತು ಗಾಯಗೊಂಡಿರುವ ಪೇದೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತ್ಯಾಚಾರ ಎಸಗಿದವರೆಲ್ಲ ಕಳ್ಳತನ ಮಾಡುವ ಕಾಯಕದಲ್ಲಿ ತೊಡಗಿದ್ದು, ಅವರಲ್ಲಿ ಐವರನ್ನು ಈಗಾಗಲೆ ಬಂಧಿಸಲಾಗಿದೆ. ಇವರು ಕೂಡ ರಾಮನಗರದ ಬಳಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದಾಗ ಗುರುವಾರ ಸಂಜೆ ಪೊಲೀಸರಿಗೆ ಸಿಕ್ಕುಬಿದ್ದಿದ್ದಾರೆ. ಆದರೆ, ಪ್ರಮುಖ ಆರೋಪಿ ರಾಮ ಮಾತ್ರ ತಪ್ಪಿಸಿಕೊಂಡಿದ್ದ. ಜ್ಞಾನಭಾರತಿ ಆವರಣದಲ್ಲಿ ಇರುವವರಿಗೆ ಮತ್ತು ಅಡ್ಡಾಡುವವರಿಗೆ ರಕ್ಷಣೆ ನೀಡಬೇಕೆಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದಾರೆ. ಕತ್ತಲಾಗುತ್ತಿದ್ದಂತೆ ನಿರ್ಜನವಾಗುವ ಪ್ರದೇಶದಲ್ಲಿ ಆಗಾಗ ಇಂತಹ ಅಪರಾಧಗಳು ನಡೆಯುತ್ತಲೇ ಇವೆ.