ಬಿಜೆಪಿ ಬಿಟ್ಟು ಹೋಗುವವರು ಹೋಗಲಿ, ಈಶ್ವರಪ್ಪ
ಯಾರು ಹೋಗಲಿ ಬಿಡಲಿ ಪಕ್ಷದ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ರಾಜ್ಯಾಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಈಶ್ವರಪ್ಪ, ಯಡಿಯೂರಪ್ಪ ವಿರುದ್ದ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ನಮ್ಮ ಪಕ್ಷದ ಕೆಲವು ನಾಯಕರುಗಳು ಪಕ್ಷ ತೊರೆದರೆ ಬಿಜೆಪಿ ಸರ್ವನಾಶವಾಗುತ್ತದೆ ಎನ್ನುವ ಭಾವನೆ ಅವರಿಗಿದ್ದರೆ ತಲೆಯಿಂದ ತೆಗೆದು ಬಿಡಲಿ. ಪಕ್ಷದಲ್ಲಿ ಇದ್ದುಕೊಂಡು ಅಧಿಕಾರ, ಸ್ಥಾನಮಾನ ಅನುಭವಿಸಿದವರು ಈಗ ತಮ್ಮ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ.
ಇದರಿಂದ ಪಕ್ಷಕ್ಕೆ ಏನೂ ತೊಂದರೆಯಾಗುವುದಿಲ್ಲ ಎಂದು ಯಡಿಯೂರಪ್ಪ ವಿರುದ್ದ ಈಶ್ವರಪ್ಪ ಹರಿಹಾಯ್ದಿದ್ದಾರೆ.
ಯಡಿಯೂರಪ್ಪನವರ ಹೊಸ ಪಕ್ಷದ ಬಗ್ಗೆ ಗಮನ ಸೆಳೆದಾಗ, ಮೇಲಿನ ಹೇಳಿಕೆ ನೀಡುತ್ತಾ ಈಶ್ವರಪ್ಪ, ವರಿಷ್ಠರು ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷ ಬಲ ಪಡಿಸುವ ಜವಾಬ್ದಾರಿ ನೀಡಿದ್ದಾರೆ. ಅದನ್ನು ಈಡೇರಿಸುವುದು ನನ್ನ ಮೊದಲ ಗುರಿಯೆಂದು ಹೇಳಿದ್ದಾರೆ.
ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಿ ಅವರಿಗಿರುವ ಗೊಂದಲವನ್ನು ನಿವಾರಿಸುತ್ತೇನೆ. ಆ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಕೆಲಸ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಪಕ್ಷ, ಸಚಿವರು, ಸರಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಜನ ನಮಗೆ ಮತ್ತೆ ಆಶೀರ್ವಾದ ಮಾಡುತ್ತಾರೆ ಎಂದು ಈಶ್ವರಪ್ಪ ಅಚಲ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದಷ್ಟು ಬಿಜೆಪಿಗೆ ಲಾಭ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕಾಂಗ್ರೆಸ್ ಅಧ್ಯಕ್ಷೆ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಸರಕಾರದ ಬಗ್ಗೆ ಟೀಕೆ ಮಾಡಿದ್ದು ಬೇಸರ ತಂದಿದೆ ಎಂದು ಈಶ್ವರಪ್ಪ ಹೇಳಲು ಮರೆಯಲಿಲ್ಲ.