ಕೇರಳ ಪದ್ಮನಾಭನ ಅನಂತ ಆಸ್ತಿಗೆ ಏನಾಯಿತು?
ಒಂದೂವರೆ ವರ್ಷದ ಹಿಂದೆ ಇಡೀ ಜಗತ್ತಿನ ಗಮನ ಸೆಳೆದ ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇಗುಲದ ಅಮೂಲ್ಯ ಆಸ್ತಿಯನ್ನು ಕಾಪಾಡಲು ಕೇರಳ ಸರಕಾರ ಕಟಿಬದ್ಧವಾಗಿದೆ. ಅದಕ್ಕಾಗಿ 23.61 ಕೋಟಿ ರೂಪಾಯಿ ವಿದ್ಯುನ್ಮಾನ ಸಾಧನಗಳನ್ನು ಬಳಸುವ ಪ್ರಸ್ತಾವಕ್ಕೆ ಸರಕಾರ ಅಸ್ತು ಅಂದಿದೆ.
ಮೊದಲ ಹಂತದಲ್ಲಿ ಸರಕಾರಿ ಸ್ವಾಮ್ಯದ ಕೆಲ್ಟ್ರಾನ್ 9.8 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಮಾಡಲಿದ್ದು, ಇದಕ್ಕೆ ಸರಕಾರ ಆಡಳಿತಾತ್ಮಕ ಅಂಗೀಕಾರ ನೀಡಿದೆ ಎಂದು ಮುಖ್ಯಮಂತ್ರಿ ಊಮ್ಮನ್ ಚಾಂಡಿ ತಿಳಿಸಿದ್ದಾರೆ.
ಮೂರು ಹಂತಗಳಲ್ಲಿ ಒಟ್ಟು 23.61 ಕೋಟಿ ರೂ. ವೆಚ್ಚದಲ್ಲಿ ದೇಗುಲಕ್ಕೆ ಅಬೇಧ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವವನ್ನು ಕೆಲ್ಟ್ರಾನ್ ಸರಕಾರಕ್ಕೆ ಸಲ್ಲಿಸಿದೆ. ದೇಗುಲದ ಭದ್ರತಾ ವೆಚ್ಚಗಳನ್ನು ತಾನು ಭರಿಸುವುದಾಗಿ ಹೇಳಿ ಸರಕಾರ ಈಗಾಗಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿದೆ.
ದೇಗುಲದ ನೆಲಮಾಳಿಗೆಯಲ್ಲಿರುವ ಕೊಠಡಿಗಳಲ್ಲಿ ಸುಮಾರು 1.50 ಲಕ್ಷ ಕೋಟಿ ರೂ. ಅಮೂಲ್ಯ ಸಂಪತ್ತು ಪತ್ತೆಯಾದ ಬಳಿಕ ಈ ದೇಗುಲ ಜಾಗತಿಕ ಆಕರ್ಷಣೆಯಾಗಿತ್ತು. ಸಂಪತ್ತಿನ ರಕ್ಷಣೆಗೆ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲು ನ್ಯಾಯಾಲಯ ಸರಕಾರಕ್ಕೆ ಸೂಚಿಸಿತ್ತು.
ಸಂಪತ್ತಿನ ಕಾವಲಿಗೆ ಈಗಾಗಲೇ ಅಭೂತಪೂರ್ವ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಲೋಪರಹಿತ ಭದ್ರತೆಯನ್ನು ಒದಗಿಸುವ ಪ್ರಸ್ತಾವವನ್ನು Keltron ಮುಂದಿಟ್ಟಿದೆ.