ಯಡಿಯೂರಪ್ಪ ಎಲ್ಲೋ ನಾನೂ ಅಲ್ಲೇ:ರೇಣುಕಾಚಾರ್ಯ
ಯಾವುದೇ ಮಾಧ್ಯಮ ಹೇಳಿಕೆಯ ಆರಂಭ ಮತ್ತು ಅಂತ್ಯದಲ್ಲಿ ಯಡಿಯೂರಪ್ಪನವರು ನಮ್ಮ ನಾಯಕರು, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದ್ದು ಎಂದು ಹೇಳಿಕೆ ನೀಡುತ್ತಲೇ ಬರುತ್ತಿದ್ದ ಅಬಕಾರಿ ಸಚಿವ ಎಂ ಪಿ ರೇಣುಕಾಚಾರ್ಯ, ಯಡಿಯೂರಪ್ಪನವರು ಎಲ್ಲಿ ಇರುತ್ತಾರೋ ಅಲ್ಲಿ ನಾವು. ಅವರ ಬೆಂಬಲಿಗರಾದ ನಾವು ಅವರೊಂದಿಗೆ ಹೆಜ್ಜೆ ಹಾಕುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ರೇಣುಕಾಚಾರ್ಯ ಅವರ ಹೇಳಿಕೆಗೆ ಹರಿಹರ ಶಾಸಕ ಬಿ ಪಿ ಹರೀಶ್ ಮತ್ತು ತುಮಕೂರು ಸಂಸದ ಜಿ ಎಸ್ ಬಸವರಾಜ್ ಕೂಡಾ ಜೈ ಎಂದಿದ್ದಾರೆ. ಕಾಲಾಯ ತಸ್ಮೈ ನಮಃ ಎನ್ನುವ ಹಾಗೆ ಇನ್ನಷ್ಟು ಯಡಿಯೂರಪ್ಪ ಬೆಂಬಲಿಗರು ಡಿಸೆಂಬರ್ ನಲ್ಲಿ ಜೈ ಎನ್ನುವ ಸಾಧ್ಯತೆ ಇಲ್ಲದಿಲ್ಲ.
ಯಡಿಯೂರಪ್ಪ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟದ ಮಾತು. ಅವರೇ ನಮ್ಮ ನಾಯಕರು, ನಮ್ಮ ನಮ್ಮ ಕ್ಷೇತ್ರದ ಹಿರಿಯರ ಮತ್ತು ಮತದಾರರ ಜೊತೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಕಲ್ಪಿಸಿ ಕೊಳ್ಳಲಾಗದು. ಅವರಿಗೆ ಇನ್ನೊಂದು ಪರ್ಯಾಯ ಶಕ್ತಿ ಪಕ್ಷದಲ್ಲಿ ಇನ್ನೂ ಹುಟ್ಟಿಲ್ಲ. ಜಗದೀಶ್ ಶೆಟ್ಟರ್ ಉತ್ತಮ ಅಭಿವೃದ್ದಿ ಕೆಲಸ ನಡೆಸಿಕೊಂಡು ಬಂದಿದ್ದಾರೆ. ಆದರೂ ಯಡಿಯೂರಪ್ಪ ಇಲ್ಲದೆ ಮತ ಕೇಳಲು ಸಾಧ್ಯವಾಗದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ತುಮಕೂರು ಸಂಸದ ಬಸವರಾಜ್ ಮಾತನಾಡಿ ಯಡಿಯೂರಪ್ಪನವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ದ ಎಂದು ಹೇಳಿದರೆ, ನಮ್ಮ ನಾಯಕರಾದ ಯಡಿಯೂರಪ್ಪ ಅವರ ನಡೆಯನ್ನು ಹಿಂಬಾಲಿಸುತ್ತೇವೆ. ಸದ್ಯಕ್ಕೆ ಯಡಿಯೂರಪ್ಪ ಬಿಜೆಪಿಯಲ್ಲಿದ್ದಾರೆ.
ಹಾಗಾಗಿ ನಾವೂ ಬಿಜೆಪಿಯಲ್ಲಿದ್ದೇವೆ. ಮುಂದೆ ಅವರು ಹೊಸ ಪಕ್ಷ ಸ್ಥಾಪಿಸಿದರೆ ಅವರೊಂದಿಗೆ ಹೋಗುತ್ತೇವೆ ಎಂದು ಬಿ ಪಿ ಹರೀಶ್ ಸ್ಪಷ್ಟವಾಗಿ ಹೇಳಿದರು.