ಯಡಿಯೂರಪ್ಪಗೆ ಮತ್ತೆ ಜಯ: ಜಾರಿದ ಜಾರಕಿಹೊಳಿ
ಹೌದು ಇಂದು ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಮ್ಮವರೇ ಗೆಲ್ಲುವಂತೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಅವರು ಅತ್ತ ಗುಲ್ಬರ್ಗಾದಲ್ಲಿ ನಡೆಯುತ್ತಿರುವ ಸಂಪುಟ ಸಭೆಗೆ ಗೈರು ಹಾಜರಾಗಿ, ಇತ್ತ ತಮ್ಮ ನಾಯಕ ಯಡಿಯೂರಪ್ಪ ಸೂಚಿತ ಅಭ್ಯರ್ಥಿಗೆ ಗೆಲುವು ದಕ್ಕುವಂತೆ ನೋಡಿಕೊಂಡಿದ್ದಾರೆ. ಇದರಿಂದ ಯಡಿಯೂರಪ್ಪ ಅವರ ಕಡು ವಿರೋಧಿ ಸಚಿವ ಬಾಲಚಂದ್ರ ಜಾರಕಿಹೊಳಿಗೆ ಸೋಲುಣಿಸಿದ್ದಾರೆ.
ಪ್ರಮೀಳಾ ರಾಜ್ಯ: ರಾಯಭಾಗ ತಾಲೂಕಿನ ಕುಡಚಿಯ ಶಾಂತ ಕೃಷ್ಣ ಕಳ್ಳೋಲಿಕಾರ್ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 86 ಸದಸ್ಯರ ಜಿಪಂನಲ್ಲಿ 63 ಮಂದಿ ಬಿಜೆಪಿಯವರಿದ್ದಾರೆ. ಶಾಂತ ಅವರು ಮಾನವಶಾಸ್ತ್ರದಲ್ಲಿ (Anthropology) ಸ್ನಾತಕೋತ್ತರ ಪದವೀಧರೆ. ಜತೆಗೆ ಬಿ.ಎಡ್ ಸಹ ಮಾಡಿದ್ದಾರೆ.
ಶಾಂತ ಅವರ ಸೋದರರ ಪೈಕಿ ಒಬ್ಬರು ತಮಿಳುನಾಡಿನಲ್ಲಿ IAS ಅಧಿಕಾರಿಯಾಗಿದ್ದರೆ ಮತ್ತೊಬ್ಬರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ.
ಬಾಗೇವಾಡಿ ತಾಲೂನಿಕ ಉಷಾ ಕಲ್ಲಪ್ಪ ಶ್ರಿತ್ರಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಗಮನಾರ್ಹವೆಂದರೆ ಬೆ.ಜಿ.ಪಂ ನಲ್ಲಿ 35 ಮಹಿಳಾ ಸದಸ್ಯರಿದ್ದಾರೆ. ಸುವರ್ಣ ವಿಧಾನ ಸೌಧ ಉದ್ಘಾಟನೆ ನಿಮಿತ್ತ ಚುನಾವಣೆಗಳು ಸುಮಾರು 1 ತಿಂಗಳು ತಡವಾಗಿ ನಡೆಯಿತು.