ರೈಲ್ವೆ ಕೃಪಾಕಟಾಕ್ಷ:ಕಾರವಾರ ರಾತ್ರಿ ರೈಲು ಆರಂಭ
ಟ್ರೈನ್ ಸಂಖ್ಯೆ 16517 \16523 ಯಶವಂತಪುರ ಜಂಕ್ಷನ್ ನಿಂದ ಪ್ಲಾಟ್ ಫಾರ್ಮ್ ನಂಬರ್ ಒಂದರಿಂದ ರಾತ್ರಿ 8.35ಕ್ಕೆ ಹೊರಟಿದೆ. ಬೆಂಗಳೂರು ಸಿಟಿ, ಮಂಡ್ಯ, ಮೈಸೂರು, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 8.35ಕ್ಕೆ ತಲುಪಲಿದೆ.
ಅಲ್ಲಿಂದ 12 ಬೋಗಿ ಕಾರವಾರಕ್ಕೆ 5 ಬೋಗಿ ಕಣ್ಣೂರಿಗೆ ಸೇರ್ಪಡೆಯಾಗಲಿದೆ. ಬೆಳಗ್ಗೆ 8.45/ 9ಕ್ಕೆ ಮಂಗಳೂರು ಸೆಂಟ್ರಲ್ ನಿಂದ ಹೊರಟು ಕಾರವಾರ ತಲುಪಲಿದೆ. ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರಸ್ತೆ ಬೈಂದೂರು, ಭಟ್ಕಳ, ಮುರುಡೇಶ್ವರ, ಕುಮಟಾ, ಗೋಕರ್ಣ, ಅಂಕೋಲಾ ರೈಲ್ವೆ ನಿಲ್ದಾಣದಲ್ಲಿ ಎರಡು ನಿಮಿಷ ರೈಲು ನಿಲುಗಡೆಯಾಗಲಿದೆ.
ಬೆಂಗಳೂರಿನಿಂದ ಕಣ್ಣೂರಿಗೆ ಸಾಗುವ ರೈಲನ್ನು ಮಂಗಳೂರಿನಲ್ಲಿ ಪ್ರತ್ಯೇಕಿಸಿ ಉಡುಪಿ, ಕುಂದಾಪುರ, ಭಟ್ಕಳ ಮಾರ್ಗವಾಗಿ ಕಾರವಾರಕ್ಕೆ ನವೆಂಬರ್ ಒಂದರಿಂದ ರಾತ್ರಿ ರೈಲು ಆರಂಭಿಸಲು ಹೈಕೋರ್ಟ್ ರೈಲ್ವೆ ಮಂಡಳಿಗೆ ಆದೇಶ ನೀಡಿತ್ತು.
ಅಂತೂ ಕರಾವಳಿ ಭಾಗದ ಜನರ ಬಹುದಿನದ ಕನಸು ಸಾಕಾರಗೊಂಡಿದೆ. ಇದಕ್ಕೆ ಶ್ರಮಿಸಿದ ಆ ಭಾಗದ ಜನತೆ, ಸಂಸದ ಜಯಪ್ರಕಾಶ್ ಹೆಗ್ಡೆ, ವಕೀಲರಾದ ಶಿವಶಂಕರ್ ಭಟ್, ರೈಲ್ವೆ ಇಲಾಖೆ ಮತ್ತು ಸಂಚಾರ ಆರಂಭಿಸಲು ಆದೇಶ ನೀಡಿದ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಕರಾವಳಿ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.