ಜಾರಕಿಹೊಳಿಗೆ ದಸರಾ ಬಳುವಳಿ: ಯಡಿಯೂರಪ್ಪಗೆ ಕಹಿ
ಸ್ಪೀಕರ್ ಮೂಲಕ ಬಾಲಚಂದ್ರ ಜಾರಕಿಹೊಳಿ ಶಾಸಕತ್ವಕ್ಕೆ ಚ್ಯುತಿ ತಂದಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಇದು ಆಘಾತವನ್ನುಂಟು ಮಾಡಿದೆ. ಅಂದಿನಿಂದಲೂ ಯಡಿಯೂರಪ್ಪನವರನ್ನು ಕಡುವಾಗಿ ವಿರೋಧಿಸುತ್ತಾ ಬಂದಿದ್ದ ಜಾರಕಿಹೊಳಿಗೆ ತಡವಾಗಿಯಾದರೂ ಬಳುವಳಿ ಸಂದಾಯವಾಗಿದೆ. ಸಿಎಂ ಶೆಟ್ಟರ್ ಅವರ ಈ ನಿರ್ಧಾರದ ಮೂಲಕ ಬಿಜೆಪಿ ಪಕ್ಷವು ಯಡಿಯೂರಪ್ಪ ಮತ್ತು ಅವರ ಪಾಳಯಕ್ಕೆ 'ನಿಮ್ಮ ಕಥೆ ಇನ್ನಿಷ್ಟೇ' ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಜಾರಕಿಹೊಳಿ ಅವರಿಗೆ ಹೆಚ್ಚುವರಿಯಾಗಿ ಖಾತೆಗಳನ್ನು ನೀಡುವುದಾದರೆ ತಮ್ಮ ಬೆಂಬಲಿಗ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ರಾಜೂಗೌಡ, ರೇವೂನಾಯಕ ಬೆಳಮಗಿ ಹಾಗೂ ಸುನೀಲ್ ವಲ್ಯಾಪುರೆ ಅವರಿಗೂ ಹೆಚ್ಚುವರಿ ಖಾತೆಗಳನ್ನು ನೀಡಬೇಕು ಎಂದು ಯಡಿಯೂರಪ್ಪ ಬಹಿರಂಗವಾಗಿ ಆಗ್ರಹಿಸುತ್ತಿದ್ದರು ಎಂಬುದು ಗಮನಾರ್ಹ. ಗಮನಾರ್ಹವೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ (ಅರೆಭಾವಿ ಬಿಜೆಪಿ ಶಾಸಕ) ಹೊರತುಪಡಿಸಿ ಉಳಿದ ಶಾಸಕರು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರು.
ಸಚಿವ ಸುರೇಶ್ಕುಮಾರ್ ಉಸ್ತುವಾರಿಯಲ್ಲಿದ್ದ KUIDFC (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ) ಮತ್ತು KUWSB (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಜವಾಬ್ದಾರಿಗಳನ್ನು ಹಿಂಪಡೆದು ಜಾರಕಿಹೊಳಿ ಅವರಿಗೆ ವಹಿಸಲಾಗಿದೆ. ಹಾಲಿ ಜಾರಕಿಹೊಳಿ ಬಳಿ ಇದ್ದ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಯಥಾಪ್ರಕಾರ ಮುಂದುವರಿಯಲಿದೆ.
ಆನೇಕಲ್ ನಾರಾಯಣಸ್ವಾಮಿಗೂ ಒಲಿದ ಅದೃಷ್ಟ: ಇದೇ ವೇಳೆ ಸಮಾಜ ಕಲ್ಯಾಣ ಮತ್ತು ಬಂದೀಖಾನೆ ಸಚಿವ ಎ ನಾರಾಯಣಸ್ವಾಮಿ ಅವರಿಗೆ ಹಿಂದುಳಿದ ವರ್ಗಗಳ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಈ ಇಲಾಖೆಯನ್ನು ಈಗ ಸಮಾಜ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಲಾಗಿದೆ.