ಕಾಳಿ ಸ್ವಾಮಿ ವಿರುದ್ಧ ತನಿಖೆ, ಅಶೋಕ್ ಭರವಸೆ
ಮಂಗಳವಾರ ಮಧ್ಯಾಹ್ನ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಪ ಮುಖ್ಯಮಂತ್ರಿಯೂ ಆಗಿರುವ ಆರ್ ಅಶೋಕ್ ಅವರು, ಪೊಲೀಸರು ತಲೆಮರೆಸಿಕೊಂಡಿದ್ದ ಋಷಿಕುಮಾರನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸದಿದ್ದರೆ ತಾವೇ ಸ್ವತಃ ಪೊಲೀಸ್ ವರಿಷ್ಠಾಧಿಕಾರಿ ಪಚಾವೋ ಅವರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವಂತೆ ಹೇಳುವುದಾಗಿ ನುಡಿದರು.
ಸ್ವಾಮಿ ವೇಷಧಾರಿಯಲ್ಲಿ ಯಾರೇ ಇರಬಹುದು, ಜನರಿಗೆ ಮೋಸ ಮಾಡಿದರೆ ಸುಮ್ಮನಿರುವುದಿಲ್ಲ. ಕಾನೂನು ಎಲ್ಲರಿಗೂ ಒಂದೆ. ನಿತ್ಯಾನಂದನಿಗೂ ಒಂದೇ, ಇನ್ನಾವುದೇ ಸ್ವಾಮೀಜಿಗೂ ಒಂದೇ. ತಪ್ಪು ಮಾಡಿದರೆ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಕಾಳಿ ಸ್ವಾಮಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಋಷಿಕುಮಾರನ ವಿರುದ್ಧ ದೂರು ಈಗಾಗಲೆ ದಾಖಲಾಗಿದೆ. ಸ್ಥಳೀಯ ಪೊಲೀಸರು ಆತನ ಕ್ರಮ ಕೈಗೊಳ್ಳಲೇಬೇಕು. ಅವರು ವಿಫಲರಾದರೆ ಅವರು ಡಿಜಿಗೆ ಬರುತ್ತದೆ, ನಂತರ ನನಗೆ ಬರುತ್ತದೆ. ಪೊಲೀಸರಿಗೆ ಈಗಾಗಲೆ ಸೂಚನೆ ನೀಡಲಾಗಿದೆ. ಅವರು ಮುಂದಿನ ಕ್ರಮ ಜರುಗಿಸುತ್ತಾರೆಂದು ನಂಬಿದ್ದೇನೆ ಎಂದು ಅವರು ಹೇಳಿದರು.
ಋಷಿಕುಮಾರನ ಹಗರಣ ಹೊರಬೀಳುತ್ತಿದ್ದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆತನ ಮನೆ, ಮಠದ ಮೇಲೆ ಕನ್ನಡ ಚಳವಳಿಗಾರರು ದಾಳಿ ಮಾಡಿ ಹೂಕುಂಡ, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಜನರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ತನ್ನ ಹೆಂಡತಿ ಮಗಳೊಂದಿಗೆ ಋಷಿಕುಮಾರ ಕೇರಳಕ್ಕೆ ಪರಾರಿಯಾಗಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮಂಗಳವಾರ ಸುವರ್ಣ 24/7 ಸುದ್ದಿವಾಹಿನಿಯಲ್ಲಿ ಪ್ರತ್ಯಕ್ಷನಾಗಿರುವ ಕಾಳಿಸ್ವಾಮಿ ತನಗೂ ಆಗ ಹಗರಣಗಳಿಗೂ ಸಂಬಂಧವೇ ಇಲ್ಲ ಎಂದು ಹೇಳುತ್ತಿದ್ದಾನೆ.