ಜೀವನದಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ
ನವರಾತ್ರಿ ಆರಂಭವಾದ ಬೆನ್ನಲ್ಲೇ ಕಾವೇರಿ ನದಿ ತೀರ್ಥೋದ್ಭವ ಸಂಭವಿಸುತ್ತಿರುವುದು ಭಕ್ತಾದಿಗಳ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿದೆ. ನಾಳೆ ಬೆಳಗ್ಗೆ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಆಗಲಿದೆ. ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಘಳಿಗೆಯಲ್ಲಿ(ತುಲಾ ಸಂಕ್ರಮಣ ಕಾಲ) ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವಾಗುತ್ತದೆ.
ಬೆಳಗ್ಗೆ 3 ಗಂಟೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜಾ ವಿಧಾನಗಳು ಆರಂಭಗೊಳ್ಳಲಿದೆ. 10-15 ಜನ ಅರ್ಚಕರ ವೇದ ಘೋಷದ ನಡುವೆ ತೀರ್ಥೋದ್ಭವವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಬೆಳಗ್ಗೆ ತೀರ್ಥೋದ್ಭವವಾಗುತ್ತಿರುವುದು ಶುಭ ಸೂಚಕ ಎಂದು ತಲಕಾವೇರಿ ದೇಗುಲದ ಹಿರಿಯ ಅರ್ಚಕರಾದ ಕೃಷ್ಣಾಚಾರ್ ಅವರು ಹೇಳಿದ್ದಾರೆ.
ತುಲಾ ಸಂಕ್ರಮಣದಂದು ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ. ತೀರ್ಥೋದ್ಭವಾದ ಗಳಿಗೆಯಲ್ಲಿ ಕಾವೇರಿಯ ನೀರಿನ ಪ್ರೋಕ್ಷಣೆಯಾದರೂ ಸಾಕು ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ತೀರ್ಥೋದ್ಭವ ವೀಕ್ಷಿಸಲು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳದಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ.
ತೀರ್ಥೋದ್ಭವ ಸಂದರ್ಭ ನೂಕುನುಗ್ಗಲು ಉಂಟಾಗುವುದರಿಂದ ನೆರೆದ ಭಕ್ತರಿಗೆ ತೀರ್ಥೋದ್ಭವದ ಭವ್ಯ ಕ್ಷಣಗಳನ್ನು ನೋಡಲು ತಲಕಾವೇರಿಯಲ್ಲಿ ಬೃಹತ್ ಪರದೆಯಲ್ಲಿ ಪ್ರದರ್ಶನಕ್ಕೆ ನಾಲ್ಕು ಕಡೆ ಅವಕಾಶ ಮಾಡಿಕೊಡಲಾಗುತ್ತಿದೆ.
ಸುಮಾರು 600 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಹೊರಗಿನಿಂದ 60 ಪೊಲೀಸ್ ಅಧಿಕಾರಿಗಳು, 300 ಸಿಬ್ಬಂದಿಗಳು, 2 ಕೆಎಸ್ಆರ್ಪಿ, 6 ಡಿಎಆರ್ ತುಕಡಿಗಳನ್ನು ಕರೆಸಲಾಗುತ್ತಿದೆ.
ವಸ್ತ್ರ ನೀತಿ, ನಿಷೇಧ: ಭಾಗಮಂಡಲದ ಸಂಗಮದಲ್ಲಿ ತೀರ್ಥಸ್ನಾನ ಮಾಡುವ ಸಂದರ್ಭ ಕೆಲವು ಕಿಡಿಗೇಡಿಗಳು ಮೊಬೈಲ್ ಕ್ಯಾಮರಾಗಳಲ್ಲಿ ಮಹಿಳೆಯರ ಚಿತ್ರಗಳನ್ನು ತೆಗೆಯುವುದನ್ನು ತಡೆಗಟ್ಟುವ ಉದ್ದೇಶದಿಂದ ಮೊಬೈಲ್ನಲ್ಲಿ ಫೋಟೋ ತೆಗೆಯುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಫೋಟೋ ತೆಗೆದಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮಫ್ತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.
ಕೊಡಗಿನ ಧಾರ್ಮಿಕ ಕೇಂದ್ರಗಳಲ್ಲಿ ಜೀನ್ಸ್, ತೋಳಿಲ್ಲದ ವಸ್ತ್ರ, ಬಿಗಿ ಉಡುಪು ಧರಿಸಿದ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲು ಭಗಂಡೇಶ್ವರ ತಲಕಾವೇರಿ ದೇಗುಲ ವ್ಯವಸ್ಥಪನಾ ಸಮಿತಿ ನಿರ್ಧರಿಸಿದೆ. ಹಾಗಾಗಿ ಈ ಬಾರಿ ತುಲಾ ಸಂಕ್ರಮಣ ನೋಡಲು ಬರುವ ಭಕ್ತಾದಿಗಳು ಧಾರ್ಮಿಕ ಕಟ್ಟು ನಿಟ್ಟು ಪಾಲಿಸಬೇಕಾದ್ದು ಅನಿವಾರ್ಯವಾಗಿದೆ.