ಪ್ಯಾಸೆಂಜರ್ ರೈಲಿಗೆ ಬೆಂಕಿ, 2 ಸಜೀವ ದಹನ
ಗುಲಬರ್ಗದಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೋಗಬೇಕಾಗಿದ್ದ ಫಲಕ್ನಾಮಾ ರೈಲಿನ ಎರಡು ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಒಂದು ಬೋಗಿಯಲ್ಲಿ ಕೆಲ ಯುವಕರು ಐದಾರು ಸೀಮೆಎಣ್ಣೆ ಡಬ್ಬಿಗಳನ್ನು ಇಟ್ಟಿದ್ದೇ ಅಗ್ನಿ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಕೆಲ ಪ್ರಯಾಣಿಕರು ಕೂಡ ಸೀಮೆಎಣ್ಣೆ ಡಬ್ಬಿಗಳನ್ನು ನೋಡಿದ್ದಾಗಿ ಹೇಳಿದ್ದಾರೆ.
ಬೋಗಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬೆರಳೆಣಿಕೆಯಷ್ಟಿದ್ದ ಜನರಲ್ಲಿ ಕೆಲವರು ರೈಲಿನಿಂದ ಜಿಗಿದು ಪಾರಾಗಿದ್ದಾರೆ. ಬೆಂಕಿ ವೇಗವಾಗಿ ವ್ಯಾಪಿಸಲು ಪ್ರಾರಂಭಿಸಿದ್ದರಿಂದ ಕೆಲವರು ಸಿಲುಕಿಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಸತ್ತವರ ಗುರುತು ಇನ್ನೂ ಪತ್ತೆಯಾಗಿಲ್ಲ.
ರೈಲು ಸಂಜೆ 4 ಗಂಟೆಗೆ ಗುಲಬರ್ಗದಿಂದ ಸೊಲ್ಲಾಪುರಕ್ಕೆ ಹೊರಡಬೇಕಿತ್ತು. ಆದರೆ, ರೈಲಿನಲ್ಲಿ ಹೆಚ್ಚು ಜನ ಪ್ರಯಾಣಿಕರು ಇರದಿದ್ದರಿಂದ ಮತ್ತು ರಕ್ಷಣಾ ಸಿಬ್ಬಂದಿಗಳು ಉಳಿದ ಬೋಗಿಗಳನ್ನು ಬೆಂಕಿ ಹೊತ್ತಿಕೊಂಡ ಎರಡು ಬೋಗಿಗಳಿಂದ ಬೇರ್ಪಡಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ, ಆ ಎರಡು ಬೋಗಿಗಳು ಸುಟ್ಟು ಕರಕಲಾಗಿದ್ದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಸನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರೇವೂ ನಾಯಕ್ ಬೆಳಮಗಿ ಅವರು ಕೂಡಲೆ ಧಾವಿಸಿ ರಕ್ಷಣಾ ಕಾರ್ಯ ಸುಗಮವಾಗುವಂತೆ ನೋಡಿದರು. ಆದರೆ, ಸತ್ತವನಿಗೆ ಮತ್ತು ಗಾಯಗೊಂಡವರಿಗೆ ರಾಜ್ಯ ಸರಕಾರದಿಂದ ಏನು ಪರಿಹಾರ ದೊರಕಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಿಲ್ಲ. ರೈಲು ಕೇಂದ್ರದ ಅಧೀನದಲ್ಲಿ ಬರುವುದರಿಂದ ಸತ್ತವರಿಗೆ ಮತ್ತು ಗಾಯಗೊಂಡವರಿಗೆ ರೈಲ್ವೆ ಇಲಾಖೆಯೇ ಪರಿಹಾರ ನೀಡಬೇಕು ಎಂದು ಹೇಳಿದರು.