ಶೀಲ ರಕ್ಷಣೆಗೆ ಮದ್ರಾಸ್ ಹೈಕೋರ್ಟಿನ ಐತಿಹಾಸಿಕ ತೀರ್ಪು
2011 ರಲ್ಲಿ ತನ್ನ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿಯ ಮೇಲಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ಈ ತೀರ್ಪು ನೀಡಿದೆ.
ಅತ್ಯಚಾರಕ್ಕೆ ಒಳಗಾಗುವ ಸಮಯದಲ್ಲಿ ಶೀಲ ರಕ್ಷಣೆಗೆ ಕೈಗೆ ಸಿಕ್ಕ ಆಯುಧದಿಂದ ಈಕೆ ತನ್ನ ತಂದೆಯನ್ನು ಕೊಲೆ ಮಾಡಿದ್ದಾಳೆ. ಯಾವುದೇ ಮಹಿಳೆ ಈ ರೀತಿಯ ಸನ್ನಿವೇಶದಲ್ಲಿ ಸಿಕ್ಕಿಕೊಂಡಾಗ ಮಾಡುವ ಕೆಲಸವನ್ನು ಈ ವಿದ್ಯಾರ್ಥಿನಿ ಕೂಡಾ ಮಾಡಿದ್ದಾಳೆ ಎಂದು ನ್ಯಾಯಾಲಯ ಸಮರ್ಥಿಸಿಕೊಂಡಿದೆ.
ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ನಿವಾಸಿ, ಬಿಎಸ್ಸಿ ಓದುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಮೇ 2011ರಲ್ಲಿ ಆಕೆಯ ತಂದೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಚೆನ್ನೈ ಹೊರವಲಯದ ಉಪನಗರದಲ್ಲಿ ಸಹೋದರ ಮತ್ತು ತಂದೆಯೊಂದಿಗೆ ವಿದ್ಯಾರ್ಥಿನಿ ವಾಸವಾಗಿದ್ದಳು. ಮದ್ಯವಸನಿಯಾಗಿದ್ದ ತಂದೆ ಮನೆಯಲ್ಲಿ ಮೃಗದಂತೆ ವರ್ತಿಸುತ್ತಿದ್ದ.
ಮಧ್ಯರಾತ್ರಿ ಸುಮಾರಿಗೆ ವಿಪರೀತವಾಗಿ ಕುಡಿದು ಬಂದಿದ್ದ ತಂದೆ ಮನೆಯಲ್ಲಿ ಆ ಸಮಯದಲ್ಲಿ ಒಬ್ಬಳೇ ಇರುವುದನ್ನು ಕಂಡು ಮಗಳ ಮೇಲೆ ಪೈಶಾಚಿಕ ಕೃತ್ಯಕ್ಕೆ ಮುಂದಾಗಿದ್ದಾನೆ. ಎಷ್ಟು ಬೇಡಿಕೊಂಡರೂ ಕೇಳದ ತಂದೆಯನ್ನು ಚಾಕುವಿನಿಂದ ಇರಿದು ವಿದ್ಯಾರ್ಥಿನಿ ಹತ್ಯೆ ಮಾಡಿದ್ದಳು.
ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಈಕೆಯ ವಿರುದ್ದ ಕೊಲೆ ಕೇಸ್ ದಾಖಲಾಗಿ ಪೊಲೀಸರು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ಆರಂಭವಾಗುವ ಮೊದಲೆ ಯುವತಿಯು ಹೈಕೋರ್ಟ್ನಲ್ಲಿ ತಾನು ಅಪರಾಧಿಯಲ್ಲ, ಆತ್ಮರಕ್ಷಣೆಗೆ ಹತ್ಯೆ ಮಾಡಿದ್ದೆ ಎಂದು ಮದ್ರಾಸ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಳು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಮುತ್ತು, ವಿದ್ಯಾರ್ಥಿನಿ ಮಾಡಿದ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಒಂದು ಪಕ್ಷ ಆಕೆ ತಂದೆಯನ್ನು ಕೊಲ್ಲದಿದ್ದರೆ, ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಳು. ಇಲ್ಲವೇ ಸಾವನ್ನಪ್ಪುತ್ತಿದ್ದಳು.
ಮೇಲಿನ ದೃಷ್ಟಿಕೋನದಿಂದ ಸೆಷನ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವ ಅಗತ್ಯವಿಲ್ಲ ಕಂಡು ಬರುವುದಿಲ್ಲ ಎಂದು ನ್ಯಾಯಮೂರ್ತಿ ನಾಗಮುತ್ತು ಅಭಿಪ್ರಾಯಪಟ್ಟಿದ್ದಾರೆ.