ಸ್ಟೌವ್ ಸ್ಫೋಟ: ಗೃಹಿಣಿ ಸಾವು, ಪತಿಗೆ ಗಾಯ
ಮೃತ ಗೃಹಿಣಿಯನ್ನು 24 ವರ್ಷದ ನಾಗವೇಣಿ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಆಕೆ ಪತಿ 30 ವರ್ಷದ ಯೋಗೀಶ್ ಗೆ ತೀವ್ರವಾಗಿ ಗಾಯಗಳಾಗಿದೆ. ಮೈ ಕೈ ಸುಟ್ಟಿಗೊಂಡಿದ್ದ ಯೋಗೀಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯೋಗೀಶ್ ದೇಹ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮಹದೇವಪುರ ಬಳಿಯ ಶಾಪಿಂಗ್ ಮಾಲ್ ನಲ್ಲಿ ಕಸ ಗುಡಿಸುವ ಕೆಲಸ ಮಾಡುವ ನಾಗವೇಣಿ ಹಾಗೂ ಗಾರ್ಮೆಂಟ್ಸ್ ಸಂಸ್ಥೆ ನೌಕರ ಯೋಗೀಶ್ ಗರುಡಾಚಾರ್ ಪಾಳ್ಯದಲ್ಲಿ ವಾಸವಾಗಿದ್ದರು.
ಭಾನುವಾರ ರಾತ್ರಿ ನಾಗವೇಣಿ ಎಂದಿನಂತೆ ಅಡುಗೆ ಮಾಡಲು ಅಣಿಯಾಗುತ್ತಿದ್ದಾಗ ಅವರ ಎರಡು ವರ್ಷದ ಮಗು ಗಲಾಟೆ ಮಾಡಲು ಆರಂಭಿಸಿದೆ. ಮಗುವನ್ನು ಅಜ್ಜಿ ಕೈಗೆ ಕೊಟ್ಟು ಹೊರಗೆ ಕರೆದುಕೊಂಡು ಹೋಗಲು ಹೇಳಿ ನಾಗವೇಣಿ ಮತ್ತೆ ಅಡುಗೆ ಮನೆಗೆ ಬಂದಿದ್ದಾರೆ.
ತರಕಾರಿ ಹೆಚ್ಚಿಕೊಂಡು ಇನ್ನೇನು ಸ್ಟೌವ್ ಹಚ್ಚಬೇಕು ಎಂದು ಬೆಂಕಿ ಕಡ್ಡಿ ಗೀರಲು ನೋಡಿದ್ದಾರೆ. ಅದರೆ, ಬೆಂಕಿ ಪೊಟ್ಟಣದಲ್ಲಿ ಕಡ್ಡಿ ಖಾಲಿಯಾಗಿರುತ್ತದೆ. ಗಂಡನಿಗೆ ಬೆಂಕಿ ಕಡ್ಡಿ ತರುವಂತೆ ಹೇಳಿದ್ದಾರೆ.
ಅದರೆ, ದುರಾದೃಷ್ಟಕ್ಕೆ ಇದೇ ಸಮಯಕ್ಕೆ ಕರೆಂಟ್ ಕೈ ಕೊಟ್ಟಿದೆ. ಅತ್ತ ಯೋಗೀಶ್ ಮೇಣದ ಬತ್ತಿಯೊಂದಿಗೆ ಬರುತ್ತಿದ್ದಂತೆ ಇತ್ತ ಸ್ಟೌವ್ ನಿಂದ ಸೀಮೆಎಣ್ಣೆ ಸೋರಿಕೆಯಾಗಿದೆ.
ಯೋಗೀಶ್ ಸ್ಟೌವ್ ಗೆ ಹತ್ತಿರವಾಗುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಹತ್ತಿರವಿದ್ದ ನಾಗವೇಣಿ ಬಟ್ಟೆಗೆ ಬೆಂಕಿ ತಗುಲಿದೆ. ಬೆಂಕಿ ನಂದಿಸಲು ಮುಂದಾದ ಯೋಗೀಶ್ ಗೂ ಬೆಂಕಿ ಹತ್ತಿಕೊಂಡಿದೆ.
ಸೀಮೆಎಣ್ಣೆ ಸೋರಿಕೆಯಿಂದ ಸ್ಟೌವ್ ಸ್ಫೋಟಗೊಂಡಿದೆ. ಶಬ್ದ ಕೇಳಿ ಮನೆಯೊಳಗೆ ಬಂದ ನಾಗವೇಣಿ ತಾಯಿ ಅಡುಗೆ ಮನೆಯಲ್ಲಿ ಬೆಂಕಿಯಲ್ಲಿ ಬೇಯುತ್ತಿದ್ದ ಮಗಳನ್ನು ಕಂಡು ಹೌಹಾರಿದ್ದಾರೆ. ತಕ್ಷಣವೇ ನೆರೆಹೊರೆಯವರ ಸಹಾಯ ಪಡೆದು ದಂಪತಿಯನ್ನು ರಕ್ಷಿಸಲು ಯತ್ನಿಸಿದ್ದಾರೆ.
ಅದರೆ, ನಾಗವೇಣಿಗೆ ತೀವ್ರ ಸುಟ್ಟುಗಾಯಗಳಾಗಿ ಅಂಬ್ಯುಲೆನ್ಸ್ ತರುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ರಕ್ಷಿಸಲು ಹೋಗಿ ಪತಿ ಯೋಗೀಶ್ ಕೂಡಾ ತೀವ್ರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸ್ ಇನ್ಸ್ ಪೆಕ್ಟರ್ ಕೆಎಸ್ ನಾಗರಾಜ್ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕೃಷ್ಣಭಟ್ ಹೇಳಿದ್ದಾರೆ.