ಸೈಕಲ್ ಸವಾರಿ ಹುಚ್ಚು, ಟೆಕ್ ಮಹೀಂದ್ರಾ ಟೆಕ್ಕಿ ಸಾವು
ಒಡಿಸ್ಸಾ ಮೂಲದ ಹರಿಕೃಷ್ಣ ಪಾತ್ರ ಕನಕಪುರ ಬಳಿಯ ಖಾಸಗಿ ರೆಸಾರ್ಟ್ ವೊಂದರಲ್ಲಿ ಶನಿವಾರ(ಅ.13) ಸೈಕಲ್ ಸವಾರಿ ಮಾಡುವಾಗ ಆಯತಪ್ಪಿ ಬಿದ್ದಿದ್ದಾರೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ಹರಿಕೃಷ್ಣ ಅವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ವಿವರಗಳು ತಿಳಿಯಲಿದೆ. ಹರಿಕೃಷ್ಣ ತನ್ನ ಗೆಳೆಯರೊಂದಿಗೆ 'ವೀಕೇಂಡ್ ಪಾರ್ಟಿ' ಮಾಡಲು ರೆಸಾರ್ಟ್ ಗೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ರಾಮನಗರ ಹಾಗೂ ಕನಕಪುರ ರಸ್ತೆ ವಡೇರಹಳ್ಳಿ ಬಳಿಯ ಖಾಸಗಿ ರೆಸಾರ್ಟ್ ಗೆ ಹರಿಕೃಷ್ಣ ತನ್ನ 10 ಜನ ಗೆಳೆಯರೊಡನೆ ಬಂದಿದ್ದಾರೆ. ಘಟನೆ ನಡೆದ ದಿನ ಹರಿಕೃಷ್ಣ ಎಲ್ಲರಿಗಿಂತ ಮುಂಚಿತವಾಗಿ ಎದ್ದು ರೆಸಾರ್ಟ್ ಮಾಲೀಕರಿಂದ ಸೈಕಲ್ ಪಡೆದು ಹೊರ ನಡೆದಿದ್ದಾನೆ. ಉಳಿದ ಗೆಳೆಯರು ಹಿಂದಿನ ದಿನ ಭರ್ಜರಿ ಊಟ, ತೀರ್ಥ ಸೇವನೆಯಿಂದ ಮಲಗಿದ್ದವರು ಇನ್ನೂ ಎದ್ದಿರಲಿಲ್ಲ ಎನ್ನಲಾಗಿದೆ.
ರೆಸಾರ್ಟ್ ನಿಂದ ಸ್ವಲ್ಪ ದೂರದಲ್ಲಿ ಮಣ್ಣಿನ ರಸ್ತೆಯಲ್ಲಿ ಹರಿಕೃಷ್ಣ ಸೈಕಲ್ ತುಳಿಯುತ್ತಿರುವಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಬೆಳಗ್ಗೆ ಆ ಕಡೆ ಬಂದ ಹಳ್ಳಿಗರೊಬ್ಬರು ಸೈಕಲ್ ಜೊತೆಗೆ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದ ಹರಿಕೃಷ್ಣ ಅವರನ್ನು ಕಂಡು ತಕ್ಷಣವೇ ರೆಸಾರ್ಟ್ ಅವರಿಗೆ ತಿಳಿಸಿದ್ದಾರೆ.
ರಸ್ತೆಯಿಂದ 6 ಅಡಿ ಕೆಳಗ್ಗೆ ಹಳ್ಳಕ್ಕೆ ಹರಿಕೃಷ್ಣ ಜಾರಿಯುವುದು ಕಂಡು ಬಂದಿದೆ. ಆತ ತೆಗೆದುಕೊಂಡು ಹೋಗಿದ್ದ ಸೈಕಲ್, ಆತನ ಕನ್ನಡಕ ಹತ್ತಿರದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಹರಿಕೃಷ್ಣ ಹಣೆಗೆ ತೀವ್ರವಾಗಿ ಪೆಟ್ಟು ಬಿದ್ದು ರಕ್ತಸ್ರಾವವಾಗಿರುವುದು ಕಾಣಿಸಿದೆ. ಚಿಕಿತ್ಸೆ ನೀಡಲು ವೈದ್ಯರ ಬಳಿಗೆ ಕರೆದೊಯ್ಯುವಷ್ಟರಲ್ಲಿ ಆತ ಪ್ರಾಣ ಕಳೆದುಕೊಂಡಿದ್ದ ಎಂಬುದು ತಿಳಿದು ಬಂದಿದೆ.
ರಸ್ತೆಯಿಂದ ಜಾರಿದ ಹರಿಕೃಷ್ಣ ಕೆಳಗುರುಳಿ ಹೊಂಡಕ್ಕೆ ಬಿದ್ದಿದ್ದಾರೆ. ಅವರ ತಲೆ ಕಲ್ಲಿಗೆ ಬಡಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ತಲಘಟ್ಟಪುರ ಪೊಲೀಸರು ಹೇಳಿದ್ದಾರೆ.
ಹರಿಕೃಷ್ಣ ಜೊತೆ ಬಂದಿದ್ದ ಸ್ನೇಹಿತರ ವಿಚಾರಣೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಮನಗರ ಎಸ್ಪಿ ಅನುಪಮ್ ಅಗರವಾಲ್ ಹೇಳಿದ್ದಾರೆ.