ಪಬ್ಲಿಕ್ ಟಿವಿಯಲ್ಲಿ ಕಾಳಿ ಸ್ವಾಮಿಯ ಡೀಲ್ - ಶೊ
ಏನಿದು ಡೀಲ್ ಕಾಳಿ? : ಅದೊಂದು ಸ್ಟಿಂಗ್ ಆಪರೇಷನ್. ಬಿಡದಿ ಆಶ್ರಮದ ಪರಮಹಂಸ ನಿತ್ಯಾನಂದ ಸ್ವಾಮಿಯ ಇಂಟರ್ ನ್ಯಾಷನಲ್ ಲೆವೆಲ್ ಪಾಪ ಕೃತ್ಯಗಳನ್ನು ರಾಜಾರೋಷದಿಂದ, ಆವೇಶದಿಂದ ಲೋಕಲ್ ಮಟ್ಟದಲ್ಲಿ ವಿರೋಧಿಸುತ್ತಿದ್ದ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ ಎಂಬಾತ ಹಣದ ಆಸೆಗೆ ಬಿದ್ದು ತಾನೇ ನೇಯ್ದ ಜೇಡರ ಬಲೆಯಲ್ಲಿ ತಾನೇ ಸಿಕ್ಕಿಬಿದ್ದ ಕಥೆ.
ವಿಷಯ ಇಷ್ಟು : ಕಾಳಿ ಸ್ವಾಮಿ ಮೇಲುನೋಟಕ್ಕೆ ಸಮಾಜದ ಕೊಳೆ ತೊಳೆಯಲು ಹೊರಟ ವೀರ ಸನ್ಯಾಸಿಯಂತೆ ಕಂಡರೂ ಆತನೊಬ್ಬ ಭಯಂಕರ ಡೀಲ್ ಮಾಸ್ಟರ್ ಎನ್ನುವುದು ಟಿವಿ ಪ್ರಸಾರ ಮಾಡಿದ ವಿಡಿಯೊ ಫುಟೇಜುಗಳಲ್ಲಿ ಬಹಿರಂಗವಾಯಿತು. ನಿತ್ಯಾನಂದನ ರಾಸಲೀಲೆಗಳು, ಆತನ ಆಶ್ರಮದ ಚಟುವಟಿಕೆಗಳ ವಿರುದ್ಧ ಹರಿಹಾಯುತ್ತಿದ್ದ ಕಾಳಿಸ್ವಾಮಿ, ಅದೇ ನಿತ್ಯಾನಂದನ ಸನ್ನಿಧಿಯಿಂದ 10 ಕೋಟಿ ರೂಪಾಯಿ ಕಪ್ಪ ಮತ್ತು ಒಂದು ಫಾರ್ಚೂನರ್ ಕಾರಿನ ಮೋಹಕ್ಕೆ ಸಿಲುಕಿದ್ದು ಕೋಟಿಗಟ್ಟಲೆ ಕನ್ನಡಿಗರ ಮುಂದೆ ಬೆತ್ತಲೆ ಆಯಿತು.
ಸ್ಟಿಂಗ್ ಆಪರೇಷನ್ನಿನಲ್ಲಿ ಇದ್ದವರು ಕಾಳಿ ಸ್ವಾಮಿಯ ಮೂರು ಮಂದಿ ಮಾಜಿ ಶಿಷ್ಯರು. ಈ ಮೊದಲು ಸ್ವಾಮಿಯ ವಾಕ್ ಚಾತುರ್ಯಕ್ಕೆ, ಪ್ರಭಾವಳಿಗೆ ಅವರು ಮನಸೋತಿರುತ್ತಾರೆ. ಆದರೆ, ಆತನಿಗೆ ಅಂಟಿದ ಕೀರ್ತಿ ಶನಿ, ಧನದಾಹ, ಪ್ರಚಾರ ಪ್ರಿಯತೆ ಕ್ರಮೇಣ ಗೊತ್ತಾಗಿ ಸ್ವಾಮಿಯನ್ನು ಖೆಡ್ಡದಲ್ಲಿ ಕೆಡವಲು ಪ್ಲಾನ್ ಮಾಡುತ್ತಾರೆ. ಅಂತಿಮವಾಗಿ ಬಲೆಗೆ ಬಿದ್ದ ಕಾಳಿ ಹಗರಣ ಪ್ರಸಾರ ಮಾಡುವುದಕ್ಕೆ ಪಬ್ಲಿಕ್ ಟಿವಿ ವೇದಿಕೆ ಆಗುತ್ತದೆ.
ಡೀಲ್ ಏನೆಂದರೆ: ನಿತ್ಯಾನಂದನ ವಿರುದ್ಧದ ಹೋರಾಟವನ್ನು ಕಾಳಿ ಸ್ವಾಮಿ ತುಳಿಯುವುದು. ನಿತ್ಯಾ ವಿರುದ್ಧ ಚಳವಳಿ ನಡೆಸುತ್ತಿರುವ ಕನ್ನಡಪರ, ಮಹಿಳಾಪರ ಸಂಘಟನೆಗಳ ಬಾಯಿ ಮುಚ್ಚಿಸುವುದು. ನಿತ್ಯಾನಂದನಿಂದ ಶೋಷಣೆಗೊಳಗಾಗಿರುವ (ಅತ್ಯಾಚಾರ ) ಅನಿವಾಸಿ ಭಾರತೀಯ ಆರತಿ ರಾವ್ ಅವರ ಹೋರಾಟ ಹಳ್ಳ ಹಿಡಿಸುವುದು. ಆದರೆ, ಈ ಪ್ರಾಜೆಕ್ಟಿಗೆ ನಿತ್ಯಾನಂದ ಆಶ್ರಮದಿಂದ ಪೇಮೆಂಟ್ ರೂಪದಲ್ಲಿ 10 ಕೋಟಿ ರೂ ಹಶ್ ಮನಿ ಹಾಗೂ ಒಂದು 4WD ಫಾರ್ಚೂನ್ ಕಾರ್ ( ಬೆಲೆ 28 ಲಕ್ಷ ) ಕೊಡಬೇಕು. ಇದನ್ನೆಲ್ಲ ಕಾಳಿಸ್ವಾಮಿಗೆ ಕೊಡಿಸುವ ಕ್ಯಾರಟ್ಟೇ ಪಬ್ಲಿಕ್ ಟಿವಿಯ ಸ್ಟಿಂಗ್ ಆಪರೇಷನ್.