ರಹಸ್ಯ ಸ್ಥಳಕ್ಕೆ ಓಡಿಹೋದ ಕಾಳಿಮಠ ಸ್ವಾಮಿ
ಕಾಳಿ ಸ್ವಾಮಿಯ ರಹಸ್ಯ ಕಾರ್ಯಾಚರಣೆ ವೇಳೆ ರಾಜ್ಯದ ಇತರ ಪ್ರಮುಖ ಮಠಮಾನ್ಯಗಳ ಬಗ್ಗೆ ಅವರು ಹಗುರವಾಗಿ ಮಾತನಾಡಿದುದು ಆಆ ( ಕೋಡಿಮಠ, ಸುತ್ತೂರು ಮಠ) ಮಠಗಳ ಭಕ್ತಗಣವನ್ನು ಕೆರಳಿಸಿತು. ಭಕ್ತರು ಕಾಳಿ ವಿರುದ್ಧ ಕೆಂಡಕಾರಲು ಶುರುವಿಟ್ಟುಕೊಂಡರು. ಅಲ್ಲಲ್ಲಿ ಸ್ವಾಮಿಯ ಪ್ರತಿಕೃತಿ ದಹಿಸುವ ಪ್ರತಿಭಟನೆಗಳು ಕಂಡುಬಂದವು.
ಬೆಳಗ್ಗೆ 7.30 ಆರಂಭವಾದ ಪಬ್ಲಿಕ್ ಟಿವಿಯ ನೇರ, ನಿರಂತರ ಪ್ರಸಾರ ಇಡೀ ದಿನ ರಾಜ್ಯದ ಟಿವಿ ವೀಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟಿತ್ತು. ಈ ಸುದ್ದಿ ಬರೆಯುವ ಹೊತ್ತಿಗೂ ( ಸಂಜೆ 5 ಗಂಟೆ ) ನೇರ ಪ್ರಸಾರ ಮುಂದುವರದೇ ಇತ್ತು.
ಈ ಮಧ್ಯೆ, ಕಾಳಿ ಸ್ವಾಮಿಯ ಪ್ರತಾಪಗಳನ್ನು ಕೇಳಿದ, ನೋಡಿದ ಕನ್ನಡ ಹೋರಾಟಗಾರರು ಕಪಟನಾಟಕ ಸೂತ್ರಧಾರಿಯ ವಿರುದ್ಧ ತಿರುಗಿ ಬಿದ್ದರು.
ರಾಜ್ಯದ ಅನೇಕ ಭಾಗಗಳಲ್ಲಿ ಕಾಳಿ ವಿರುದ್ಧದ ಹೋರಾಟಗಳು ಗರಿಗೆದರಿದವು. ಇನ್ನು ಬೆಂಗಳೂರಿನಲ್ಲಿರುವ ಕಾಳಿ ಮಠಕ್ಕೆ ಪೊಲೀಸರ ಭದ್ರತೆ ಸಿಗದಿದ್ದರೆ ಕುಪಿತ ಹೋರಾಟಗಾರರ ಆಕ್ರೋಶಕ್ಕೆ ಕಾವಿಧಾರಿ ಕಾಳಿ ತುತ್ತಾಗಬೇಕಾಗಿತ್ತು.
"ಡೀಲ್ ಕಾಳಿ" ನೇರ ಪ್ರಸಾರದ ಅವಧಿಯಲ್ಲಿ ಸ್ಟೂಡಿಯೋದಲ್ಲಿ ಅನೇಕ ಅತಿಥಿಗಳು ಹಾಜರಾದರು. ಕಾವಿಯ ನೆಪದಲ್ಲಿ ಭಾರತೀಯ ಗುರು - ಮಠ ಪರಂಪರೆಗೆ ಆಗುತ್ತಿರುವ ಅನ್ಯಾಯ ಹಾಗೂ ಚಳವಳಿಗಳ ದಿಕ್ಕು ತಪ್ಪಿಸಲು ಕಾಳಿ ಸ್ವಾಮಿ ಧರಿಸುತ್ತಿರುವ ಬಹುವಿಧ ವೇಷಗಳನ್ನು ಕನ್ನಡಪರ ಸಂಘಟನೆಗಳು, ಪತ್ರಕರ್ತರು ಮತ್ತು ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಖಂಡಿಸಿದರು.
ನದಿ ಮೂಲ, ಋುಷಿ ಮೂಲ ಹುಡುಕಬಾರದು ಎನ್ನುವುದು ನಾಣ್ಣುಡಿ. ಆದರೆ, ಯಾವ ಗುರು ಪರಂಪರೆಗೂ ಸೇರಿದಂತೆ ಕಾಣದ ಕಾಳಿ ಸ್ವಾಮಿಯ ಹೆಸರು ಋಷಿಕುಮಾರ್ ಎಂದಿರುವುದು ತಮಾಷೆಯಾಗಿದೆ. ಇತ್ತೀಚಿನ ವರದಿಗಳು ಬಂದಾಗ ಕಾಳಿ ಸ್ವಾಮಿ ತನ್ನ ನಡೆನುಡಿಗೆ ಪಶ್ಚಾತ್ತಾಪಪಡುವ, ಕಣ್ಣೀರು ಸುರಿಸುವ ಮತ್ತು ಜನತೆಯ ಕ್ಷಮೆಯಾಚಿಸುವ ದೃಶ್ಯಗಳು ಟಿವಿ ಪರದೆಗಳಲ್ಲಿ ಮೂಡಿಬರುತ್ತಿತ್ತು.
ಸಂಜೆ 5 ಗಂಟೆಯ ಬ್ರೇಕಿಂಗ್ ನ್ಯೂಸ್ ನಲ್ಲಿ ಕಾಳಿ ಸ್ವಾಮಿಗಳು ಬೆಂಗಳೂರಿನಲ್ಲಿರುವ ಗಾಯತ್ರಿ ನಗರದಲ್ಲಿರುವ ಮನೆ ಖಾಲಿ ಮಾಡಿ, 4 ಶಿಷ್ಯರು ಮತ್ತು 12 ವರ್ಷದ ಮಗಳ ಸಮೇತ ರಹಸ್ಯ ಸ್ಥಳಕ್ಕೆ ಹೊರಟಿದ್ದಾರೆ. ಕಾರ್ ನಂ KA 02 MF 8498.