ಎಸ್ಬಿಐನಿಂದ 1 ಕೋಟಿ ರು. ಚಿನ್ನ, ನಗದು ಲೂಟಿ
ಈ ಘಟನೆ ನಡೆದಿರುವುದು ಶುಕ್ರವಾರ ಮಧ್ಯರಾತ್ರಿ. ಶನಿವಾರ ಬೆಳಗಿನ ಜಾವ ಇದು ಬೆಳಕಿಗೆ ಬಂದಿದೆ. ಪ್ರಥಮ ಮಾಹಿತಿಯ ಪ್ರಕಾರ, ಕಳ್ಳತನ ನಡೆದಿರುವ ಸಮಯದಲ್ಲಿ ಬ್ಯಾಂಕಿನಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಇರಲಿಲ್ಲ. ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಧಾವಿಸಿದ್ದು ತನಿಖೆ ನಡೆಯುತ್ತಿದೆ.
ದರೋಡೆಕೋರರು ಅತ್ಯಂತ ಚಾಣಾಕ್ಷತನದಿಂದ ಬ್ಯಾಂಕ್ ಕಳ್ಳತನ ಮಾಡುವ ಸಂಚನ್ನು ರೂಪಿಸಿದ್ದರು. ಹಿಂದಿನ ಬ್ಯಾಂಕಿನಿಂದ ನೇರವಾಗಿ ಸ್ಟ್ರಾಂಗ್ ರೂಮಿಗೆ ಪ್ರವೇಶಿಸಿರುವ ಅವರು ಅಲ್ಲಿದ್ದ ಕೆಲ ಸಿಸಿಟಿವಿಗಳನ್ನು ನಾಶಪಡಿಸಿದ್ದಾರೆ. ಬ್ಯಾಂಕಿನಲ್ಲಿ ಅಳವಡಿಸಲಾಗಿದ್ದ ಸೈರನ್ ಕೂಡ ಕೂಗದಂತೆ ಅದನ್ನು ನಿಷ್ಕ್ರಿಯ ಮಾಡಿದ್ದಾರೆ.
ಇಷ್ಟೆಲ್ಲ ಚಾಣಾಕ್ಷತನ ತೋರಿದರೂ ಇನ್ನೂ ಎರಡು ಸಿಸಿಟಿವಿಗಳಲ್ಲಿ ಅವರ ಕೃತ್ಯ ಸೆರೆಯಾಗಿದೆ. ಇದು ಅಂತಾರಾಜ್ಯ ದರೋಡೆಕೋರರ ಕೈವಾಡವಿದೆ ಎಂದು ಹೇಳಿರುವ ಪೊಲೀಸರು ಸದ್ಯದಲ್ಲಿಯೇ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಯಾದಗಿರಿಯ ಖಾನಾಪೂರದಲ್ಲಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ದೋಚಲು ಯತ್ನ ನಡೆಸಲಾಗಿತ್ತು. ಆಗ ಯಶಸ್ವಿ ಕಾಣದ ಅದೇ ತಂಡ ಇಲ್ಲಿಯೂ ದರೋಡೆ ಮಾಡಿ ಯಶಸ್ವಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಒಟ್ಟು 1 ಕೋಟಿ ರು. ನಗದು ಮತ್ತು ಚಿನ್ನಾಭರಣ ಕದ್ದಿರಬಹುದೆಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.