ತಂದೆಯ ಅಂತ್ಯಕ್ರಿಯೆ ನೆನೆಸಿಕೊಂಡು ಕಣ್ಣೀರಿಟ್ಟ ದೇವೇಗೌಡ
ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಕಷ್ಟು ಕಷ್ಟ ಅನುಭವಿಸಬೇಕಾಗಿ ಬಂತು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದಾರೆ.
ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಾನು ಪೆರೋಲ್ ಕೇಳಬೇಕಾಗಿ ಬಂತು. ನನ್ನ ಸಂಪುಟಕ್ಕೆ ನೀವು ಸೇರಿಕೊಳ್ಳಿ, ನಿಮ್ಮನ್ನು ಬೇಷರತ್ತಾಗಿ ಜೈಲಿನಿಂದ ಬಿಡುಗಡೆ ಮಾಡಿಸುತ್ತೇನೆ ಎಂದು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ನನ್ನಲ್ಲಿ ಪ್ರಸ್ತಾಪಿಸಿದ್ದರು.
ಆದರೆ ಅದನ್ನು ನಾನು ನಿರಾಕರಿಸಿದ್ದೆ ಎಂದು ತುರ್ತು ಪರಿಸ್ಥಿತಿ ಸಂಕಷ್ಟವನ್ನು ನೆನೆಸಿ ದೇವೇಗೌಡರು ದುಃಖಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 110ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ದೇವೇಗೌಡ, ಕಾವೇರಿ ವಿಚಾರದಲ್ಲಿ ಸತ್ಯಾಂಶ ಮಾತನಾಡುವುದು ಸಂಸತ್ತಿನಲ್ಲಿ ಕಷ್ಟವಾಗುತ್ತಿದೆ.
ತಮಿಳುನಾಡು ಸಂಸದರು ಈ ವಿಚಾರದಲ್ಲಿ ಬೇರೊಬ್ಬರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ದೇವೇಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ತಮಿಳುನಾಡು ನಾಯಕರು ನೀಡುತ್ತಿರುವ ಹೇಳಿಕೆಗಳು ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಡಿಎಂಕೆ ನಾಯಕರುಗಳು ಮೊದಲಿನಿಂದಲೂ 356 ವಿಧೇಯಕವನ್ನು ವಿರೋಧಿಸುತ್ತಾ ಬಂದಿದ್ದಾರೆ.
ಆದರೆ ಈಗ ಅದರ ಲಾಭ ಪಡೆಯಲು ಕರ್ನಾಟಕ ಸರಕಾರವನ್ನು ಕಿತ್ತು ಹಾಕಲು 356 ವಿಧೇಯಕವನ್ನು ಬಳಸಿಕೊಳ್ಳಿ ಎಂದು ಒತ್ತಡ ತರುತ್ತಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.
ಜಾತಿ, ಧರ್ಮದ ವಿಚಾರದಲ್ಲಿ ಚುನಾವಣೆ ನಡೆಯುತ್ತಿದೆ. ಜ್ವಲಂತ ಸಮಸ್ಯೆಗಳನ್ನು ಕೇಳುವವರಿಲ್ಲ. ಇದೆಲ್ಲಾ ನೋಡಿದರೆ ತುರ್ತು ಪರಿಸ್ಥಿತಿ ಮರುಕಳಿಸುವಂತಿದೆ ಎಂದು ದೇವೇಗೌಡ ವಿಷಾದ ವ್ಯಕ್ತ ಪಡಿಸಿದ್ದಾರೆ.