ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ಜಂಟಿ ಬಂಡಾಯ
'ಮುನಿ'ಯನ ಮಾದರಿ: ಹಾಗೆ ನೋಡಿದರೆ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಕಾಯಂ ಉದ್ಯೋಗ ಗಿಟ್ಟಿಸಿರುವ ಕೆ ಎಚ್ ಮುನಿಯಪ್ಪ ಅಲ್ಲಿ ದೆಹಲಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾ ಇತ್ತ ಪಕ್ಷದ ಶಾಸಕರ ಸದ್ದಡಗಿಸುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇದರಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಡಾ. ಎಂಸಿ ಸುಧಾಕರ ಬಾಬು ಹಾಗೂ ಎನ್ ಎಚ್ ಶಿವಶಂಕ ರೆಡ್ಡಿ ಅವರ ಸದ್ಯದ ಘೋಷವಾಕ್ಯ- ಕಾಂಗ್ರೆಸ್ಸಿನಲ್ಲಿ ಮುನಿಯಪ್ಪ ಇರಬೇಕು; ಇಲ್ಲವೇ ನಾವು ಇರಬೇಕು. ಎಂಬುದಾಗಿದೆ. ಈ ಇಬ್ಬರು ಶಾಸಕರೂ ತಮ್ಮ ಕ್ಷೇತ್ರಗಳಾದ ಚಿಂತಾಮಣಿ ಮತ್ತು ಗೌರಿಬಿದನೂರಿನಲ್ಲಿ ಪ್ರತ್ಯೇಕವಾಗಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸುವ ಮೂಲಕ ನಿರ್ಣಾಯಕ ಸಮರ ಸಾರಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಗೆ ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ತಪ್ಪಿಸುವಲ್ಲಿ ಮುನಿಯಪ್ಪ 'ಕೈ'ವಾಡವೇ ನೇರ ಕಾರಣ ಎಂದು ಇಬ್ಬರೂ ಶಾಸಕರು ತೀವ್ರ ಅಸಮಾಧಾನ ಹೊಂದಿದ್ದಾರೆ.
ಮುನಿಯಪ್ಪಗೆ ಚಿಕ್ಕಬಳ್ಳಾಪುರದಲ್ಲೇನು ಕೆಲ್ಸ? : ತಮ್ಮ 'ರಾಜಕೀಯವನ್ನು' ಕೋಲಾರಕ್ಕಷ್ಟೆ ಸೀಮಿತಗೊಳಿಸದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕೈಯಾಡಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯಲ್ಲಿದ್ದ ಏಕೈಕ ಬಿಜೆಪಿ ಸದಸ್ಯರನ್ನೇ ಜಿ.ಪಂ. ಅಧ್ಯಕ್ಷರನ್ನಾಗಿಸಿದ್ದಾರೆ. ಇದು ಶಾಸಕದ್ವಯರನ್ನು ಕೆರಳಿಸಿದೆ. ಇದಕ್ಕೆ ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ ಕುಮ್ಮಕ್ಕು ನೀಡುತ್ತಿರುವುದು ಶಾಶಕರಿಬ್ಬರನ್ನೂ ಮತ್ತಷ್ಟು ರೊಚ್ಚಿಗೆಬ್ಬಿಸಿದೆ.
ಜಿ.ಪಂ.ನ 27 ಸದಸ್ಯರ ಪೈಕಿ 21 ಸದಸ್ಯರು ಕಾಂಗ್ರೆಸ್ಸಿನವರು. ಆದರೂ ಇವರಲ್ಲಿ ಯಾರೊಬ್ಬರಿಗೂ ಅಧ್ಯಕ್ಷ ಸ್ಥಾನ ದಕ್ಕದೇ ಹೋಯಿತು. ಜಿ.ಪಂ. ಅಧ್ಯಕ್ಷ ಸ್ಥಾನವು ಬಿಸಿಎಂ- ಎ ವರ್ಗಕ್ಕೆ ಮೀಸಲಾಗಿದ್ದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಚಿಂತಾಮಣಿಯ ಎಸ್ ಎನ್ ಚಿನ್ನಪ್ಪ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಸದಸ್ಯರು ಒಪ್ಪಿದ್ದರು.
ಆದರೆ ಚುನಾವಣೆ ನಡೆಯುವ ಕೆಲವೇ ಗಂಟೆಗಳ ಮೊದಲು ಕೆಲ ಸದಸ್ಯರನ್ನು ಓಲೈಸುವಲ್ಲಿ ಯಶಸ್ವಿಯಾದ ಕೆಎಚ್ ಅಧ್ಯಕ್ಷ ಸ್ಥಾನವನ್ನು ಏಕೈಕ ಬಿಜೆಪಿ ಸದಸ್ಯ ಸಿ ಆರ್ ನರಸಿಂಹ ಮೂರ್ತಿ ಅವರ ಪಾಲಾಗುವಂತೆ ಮಾಡಿದ್ದಾರೆ ಎಂದು ಶಾಸಕದ್ವಯರು ಕಿಡಿಕಾರಿದ್ದಾರೆ.
ಮುನಿಯಪ್ಪ ವಿರುದ್ಧ ಹೈಕಮಾಂಡ್ ಸೂಕ್ತ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ನನ್ನೊಂದಿಗೆ 15 ಸಾವಿರ ಕಾಂಗ್ರೆಸ್ ಸದಸ್ಯರು, 2,600 ಮಂದಿ ಬೂತ್ ಸಮಿತಿ ಪದಾಧಿಕಾರಿಗಳು ಮತ್ತು ಯುವ ಕಾಂಗ್ರೆಸ್ಸಿನ 2,400 ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಘೋಷಿಸಿಲಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಧಕ್ಕೆಯಾಗಲಿದೆ ಎಂದು ಶಾಸಕದ್ವಯರು ಹರಿಹಾಯ್ದಿದ್ದಾರೆ.