ಕಾವೇರಿ ಗೊಂದಲಗಳಿಗೆ ಪ್ರಧಾನಿಯೇ ಕಾರಣ : ಶೆಟ್ಟರ್
ಸೆಪ್ಟೆಂಬರ್ 19ರಂದು ಮನಮೋಹನ ಸಿಂಗ್ ಅವರು, ಸೆ.19ರಿಂದ ಅ.15ರವರೆಗೆ ಪ್ರತಿದಿನ ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಬೇಕೆಂದು ನೀಡಿದ ಆದೇಶಕ್ಕೆ ಯಾವುದೇ ಆಧಾರವಿಲ್ಲ. ಇದರಿಂದ ಕರ್ನಾಟಕದ ಜನತೆಗೆ ತುಂಬಲಾಗದ ಅನ್ಯಾಯವಾಗಿದೆ. ಪರಿಸ್ಥಿತಿಯ ಅಧ್ಯಯನ ಮೊದಲೇ ನಡೆಸಿದ್ದರೆ ಇಂತಹ ಬಿಕ್ಕಟ್ಟು ಸೃಷ್ಟಿಯಾಗುತ್ತಿರಲೇ ಇಲ್ಲ ಎಂದು ಶೆಟ್ಟರ್ ಅವರು ವಿಷಾದಿಸಿದರು.
ಕಾವೇರಿ ನೀರು ಪ್ರಾಧಿಕಾರದ ಜೊತೆ ಕುಳಿತುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ ಮೇಲೆ, ಪ್ರಾಧಿಕಾರದ ಆದೇಶದ ಮರುಪರಿಶೀಲನೆಗೆ ಮನಮೋಹನ ಸಿಂಗ್ ಅವರು ಭೇಟಿ ಮಾಡಲು ಅವಕಾಶವನ್ನೇ ಒದಗಿಸಲಿಲ್ಲ. ಕೊನೆಗೆ, ಪ್ರಧಾನಿ ಕಚೇರಿಯಲ್ಲಿ ಅರ್ಜಿ ಗುಜರಾಯಿಸಿ ವಾಪಸ್ ಬರಬೇಕಾಯಿತು ಎಂದು ಅವರು ನುಡಿದರು.
ಸೆ.19ರಂದು ಆದೇಶ ಹೊರಡಿಸುವ ಮುನ್ನ ಸರಿಯಾದ ಚರ್ಚೆ ನಡೆಸದೆಯೆ ಆದೇಶ ನೀಡಲಾಯಿತು. ಆದೇಶದಿಂದ ರಾಜ್ಯದ ಜನತೆಗೆ ಅನ್ಯಾಯವಾಗುತ್ತದೆ ಮತ್ತು ಇದರಿಂದ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಂದೇ ಎಚ್ಚರಿಸಿದ್ದೆವು. ಆದೇಶ ಹೊರಡಿಸುವ ಮುನ್ನ ತಜ್ಞರ ತಂಡವನ್ನು ಅಧ್ಯಯನಕ್ಕೆ ಕಳಿಸಬೇಕೆಂದು ಮನವಿ ಮಾಡಿಕೊಂಡಿದ್ದೆವು. ಆ ಮನವಿಯನ್ನು ಪ್ರಧಾನಿ ಮಾನ್ಯ ಮಾಡಲೇ ಇಲ್ಲ ಎಂದು ಶೆಟ್ಟರ್ ಹೇಳಿದರು.
ಶೆಟ್ಟರ್ ಮತ್ತಿತರ ಐದು ಜನರ ವಿರುದ್ಧ ತಮಿಳುನಾಡು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್ ಅವರು, ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು. ಶೆಟ್ಟರ್, ನೀರಾವರಿ ಸಚಿವ ಬೊಮ್ಮಾಯಿ, ಪ್ರಧಾನ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಕಾನೂನು ಸಚಿವ ಸುರೇಶ್ ಕುಮಾರ್, ಮುಖ್ಯ ಇಂಜಿನಿಯರ್ ವಿಜಯಕುಮಾರ್ ಮತ್ತು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಹಾಕಲಾಗಿದೆ.
ಪ್ರಧಾನಿಗೆ ಮೋಯ್ಲಿ ಮನವಿ : ಕರ್ನಾಟಕ ಮತ್ತು ತಮಿಳುನಾಡಿನ ನೀರಿನ ಸಂಗ್ರಹ, ಬೆಳೆಯ ಅಧ್ಯಯನ ನಡೆಸಿರುವ ಕೇಂದ್ರದ ತಜ್ಞರ ತಂಡ ಪ್ರಧಾನಿಗೆ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನಾಳೆಯೇ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ, ಅಧಿಕಾರಿಗಳ ಸಭೆ ಕರೆದು ಕರ್ನಾಟಕಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿರುವುದಾಗಿ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಕಾರ್ಪೋರೇಟ್ ಸಚಿವ ವೀರಪ್ಪ ಮೋಯ್ಲಿ ಅವರು ತಿಳಿಸಿದ್ದಾರೆ. ಪ್ರಧಾನಿಯನ್ನು ಮೋಯ್ಲಿ ಬುಧವಾರ ಭೇಟಿಯಾದರು.