ರಾಬರ್ಟ್ ವದ್ರಾ ಶುದ್ಧಹಸ್ತ : ಭಾರದ್ವಾಜ್ ಪ್ರಮಾಣಪತ್ರ
ಭ್ರಷ್ಟಾಚಾರದ ವಿರುದ್ಧ ಭಾರತ ಸಂಘಟನೆಯ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು, ಸೋನಿಯಾ ಗಾಂಧಿ ಅವರ ಅಳಿಯ, ಪ್ರಿಯಾಂಕಾ ಗಾಂಧಿ ವದ್ರಾ ಗಂಡ ರಾಬರ್ಟ್ ವದ್ರಾ ಅವರು ಹರ್ಯಾಣಾದಲ್ಲಿ ಡಿಎಲ್ಎಫ್ ರಿಯಲ್ ಎಸ್ಟೇಟ್ ಸಂಸ್ಥೆಯ ಜೊತೆ ಕೈಜೋಡಿಸಿ ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ಅತ್ಯಂತ ಕಡಿಮೆ ಬೆಲೆಗೆ ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೆ ಕೇಂದ್ರ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಇಂದಿರಾ ಗಾಂಧಿ ಕಾಲದಿಂದ ಸೋನಿಯಾ ಗಾಂಧಿಯ ಕಾಲದವರೆಗೆ ಗಾಂಧಿ ಕುಟುಂಬದ ವಿರುದ್ಧ ಅನೇಕರು ಅನೇಕ ರೀತಿಯ ಆರೋಪಗಳನ್ನು ಹೊರಿಸುತ್ತಲೇ ಬಂದಿದ್ದಾರೆ. ಆದರೆ, ಆ ಎಲ್ಲ ಆರೋಪಗಳು ಸುಳ್ಳಾಗಿ ಪರಿಣಮಿಸಿವೆ ಎಂದು ಅವರು ಹೇಳಿದ್ದಾರೆ.
"ಅರವಿಂದ್ ಕೇಜ್ರಿವಾಲ್ ಕಾನೂನು ತಜ್ಞರೇನು? ಶಾಸನ ರಚಿಸುವ ಕಾರ್ಯಕ್ಕೆ ಇವರೇಕೆ ಕೈ ಹಾಕುತ್ತಿದ್ದಾರೆ? ನಾನೇನಾದರೂ ಕಾನೂನು ಮಂತ್ರಿಯಾಗಿದ್ದರೆ ಅರವಿಂದ್ ಕೇಜ್ರಿವಾಲ್ ಅಂಥವರಿಗೆ ಯಾವುದೇ ಕಾನೂನು ರಚಿಸಲು ಅವಕಾಶವನ್ನೇ ನೀಡುತ್ತಿರಲಿಲ್ಲ" ಎಂದು ಅವರು ಕೇಜ್ರಿವಾಲ್ ಅವರನ್ನು ಹಂಸರಾಜ್ ಭಾರದ್ವಾಜ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತ್ತಷ್ಟು ಆರೋಪ : ರಾಬರ್ಟ್ ವದ್ರಾ ಅವರ ಮೇಲೆ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಮತ್ತಷ್ಟು ಆರೋಪಗಳನ್ನು ಹೊರಿಸಿ, ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ವಧ್ರಾ ಅವರಿಗೆ ಡಿಎಲ್ಎಫ್ ರಿಯಲ್ ಎಸ್ಟೇಟ್ ಸಂಸ್ಥೆ ಬಡ್ಡಿರಹಿತ ಸಾಲ ನೀಡಿದೆ ಎಂದು ಆರೋಪಿಸಿರುವ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರ ನೇರ ಕೈವಾಡ ಇರದಿದ್ದರೆ, ಕಂಡಕಂಡ ಕಾಂಗ್ರೆಸ್ ನಾಯಕರೆಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವದ್ರಾ ಅವರನ್ನು ಬೆಂಬಲಿಸಿ ಹೇಳಿಕೆಗಳೇಕೆ ನೀಡುತ್ತಿದ್ದಾರೆ ಎಂದು ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ಇಬ್ಬರು ಖಾಸಗಿ ವ್ಯಕ್ತಿಗಳ ನಡುವಿನ ಈ ಪ್ರಕರಣದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಚಿದಂಬರಂ ಅವರು ರಾಬರ್ಟ್ ವದ್ರಾ ಅವರ ಆದಾಯ ತೆರಿಗೆ ಅಸೆಸ್ಮೆಂಟ್ ಅಧಿಕಾರಿಯೆ ಎಂದು ಪ್ರಶ್ನಿಸಿದ್ದಾರೆ.