ಬಾಬುಗೂ ಜಾಮೀನು; ಬಳ್ಳಾರಿ ಪಾಳಯದಲ್ಲಿ ಮಂದಹಾಸ
ತಮ್ಮನಿಗಾಗಿ ಜಾಮೀನು ಖರೀದಿ ಪ್ರಕರಣದಲ್ಲಿ ಗುರುತರ ಆರೋಪ ಹೊತ್ತಿದ್ದ ಕಂಪ್ಲಿ ಶಾಸಕ ಸುರೇಶ್ ಬಾಬುಗೆ ಆಂಧ್ರ ಹೈಕೋರ್ಟ್ ಜಾಮೀನು ಲಭಿಸಿದ್ದು, ಚೆರ್ಲಪಲ್ಲಿ ಜೈಲಿನಿಂದ ಇಂದು ಸೋಮಶೇಖರ ರೆಡ್ಡಿ ಅವರೊಂದಿಗೆ ಬಾಬು ಸಹ ಬಿಡುಗಡೆಯಾಗಲಿದ್ದಾರೆ. ಒಂದು ಲಕ್ಷ ರೂ. ಮೌಲ್ಯ ಎರಡು ಬಾಂಡ್ ಹಾಗೂ ಪಾಸ್ಪೋರ್ಟ್ ಅನ್ನು ನ್ಯಾಯಾಲಯದಲ್ಲಿ ಜಾಹರುಪಡಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ. ಕಳೆದ ತಿಂಗಳು ಇವರಿಬ್ಬರನ್ನು ಆಂಧ್ರ ACB ಬಂಧಿಸಿತ್ತು.
ಹೈಕೋರ್ಟಿನಲ್ಲಿ ಇಂದು ವಿಚಾರಣೆ ನಡೆಸಿದ ಸಮುದ್ರಾಲ ಗೋವಿಂದರಾಜು ನ್ಯಾಯಪೀಠವು ಕಂಪ್ಲಿ ಶಾಸಕ ಸುರೇಶ್ ಬಾಬು ವಿರುದ್ಧ ದಾಖಲಾಗಿದ್ದ ಎರಡನೆಯ ಆರೋಪಪಟ್ಟಿಯ ವಿಚಾರಣೆ ನಡೆಸಿದ ಬಳಿಕ ಈ ಜಾಮೀನು ಮಂಜೂರು ಮಾಡಿದ್ದಾರೆ.
ಇದರೊಂದಿಗೆ, ಅಕ್ರಮ ಗಣಿ ಪ್ರಕರಣದಲ್ಲಿ ಚಂಚಲಗೂಡ ಜೈಲುವಾಸಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ಖರೀದಿಸುವ ಪ್ರಕರಣದಲ್ಲಿ ಬಹುತೇಕ ಎಲ್ಲ ಆರೋಪಿಗಳಿಗೂ ಜಾಮೀನು ಪ್ರಾಪ್ತಿಯಾಗಿದೆ.
ಶ್ರೀಲಕ್ಷ್ಮೀಗೆ ತಾತ್ಕಾಲಿಕ ಜಾಮೀನು: ಇದೇ ವೇಳೆ, ಒಎಂಸಿ ಪ್ರಕರಣ ಸಂಬಂಧ ಬಂಧನದಲ್ಲಿರುವ ಆಂಧ್ರದ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮೀ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶ್ರೀಲಕ್ಷ್ಮೀ ಅನಾರೋಗ್ಯದ ನೆಪವೊಡ್ಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಶಸ್ತ್ರಚಿಕಿತ್ಸೆ ನಿಮಿತ್ತ ಶ್ರೀಲಕ್ಷ್ಮೀಗೆ ಈ ತಾತ್ಕಾಲಿಕ ಜಾಮೀನು ಲಭಿಸಿದೆ.
ಈ ಮಧ್ಯೆ, ಜನಾರ್ದನ ರೆಡ್ಡಿ ಆಪ್ತ ಸಹಾಯಕ ಮೆಹಫೂಸ್ ಅಲಿಖಾನ್ ಅವರನ್ನು OMC ಪ್ರಕರಣದಲ್ಲಿ ಸಿಬಿಐ ವಶಕ್ಕೆ ಒಪ್ಪಿಸಲಾಗಿದ್ದು, ಸಿಬಿಐ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.