ಮಕ್ಕಳ ಸಂಬಂಧ ಸಕ್ರಮಗೊಳಿಸಲು ಹೆಣದ ಜತೆ ಮದುವೆ
ಬಂಕಾ ಜಿಲ್ಲೆಯಲ್ಲಿ ಚುಡ್ಕಿ ಹೆಮಬ್ರಾಮ ಮತ್ತು ಮಹಾಲಾಲ ಮಾರಂಡಿ ಕಳೆದ 10 ವರ್ಷಗಳಿಂದ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಆದರೆ ಅವರು ವಿವಾಹವಾಗಿರಲಿಲ್ಲ. ಅವರಿಗೆ ಇಬ್ಬರು ಪುತ್ರರರು ಮತ್ತು ಇಬ್ಬರು ಪುತ್ರಿಯರು ಇದ್ದರು.
ಇಂತಿಪ್ಪ 'ದಂಪತಿ' ಯಾಕಪ್ಪಾ ಮದುವೆಯಾಗಿರಲಿಲ್ಲ ಅಂದರೆ ಮದುವೆಯಾಗಲು ಅವರ ಬಳಿ ದುಡ್ಡಿರಲಿಲ್ಲ. ಬಿಹಾರದ ಈ ಭಾಗದಲ್ಲಿ ಮದುವೆಯಾಗಬೇಕೆಂದರೆ ನೆಂಟರಿಷ್ಟರಿಗೆ ಔತಣ ನೀಡಿ, ಅವರ ಸಮ್ಮುಖದಲ್ಲಿ ಪಾಣಿಗ್ರಹಣ ಆಗಬೇಕು. ಹಾಗಾಗಿ, ಇನ್ನೇನು ಶಾಸ್ತ್ರೋಕ್ತವಾಗಿ ಮದುವೆಯಾಗಿಬಿಡೋಣ ಎಂದು 'ದಂಪತಿ' ಆಲೋಚಿಸುತ್ತಿರುವಾಗಲೇ ದುರ್ಘಟನೆ ನಡೆದುಹೋಗಿದೆ.
ಕಳೆದ ವಾರ 'ಪತಿರಾಯ' ಮಹಾಲಾಲ ಮಾರಂಡಿ ಸಾವನ್ನಪ್ಪಿದ್ದಾನೆ. ಇದರಿಂದ ಮಕ್ಕಳ ಭವಿಷ್ಯ ನೆನೆದು ಕಂಗಾಲಾಗಿದ್ದಾಳೆ. ಸಮಾಜ ತನ್ನ ಕುಟುಂಬವನ್ನು ದುಃಸ್ಥಿತಿಗೆ ತಳ್ಳುತ್ತದೆ ಎಂದೆಣೆಸಿದ 'ಪತ್ನಿ' ಚುಡ್ಕಿ ಹೆಮಬ್ರಾಮ, ಚಿಂತಾಕ್ರಾಂತಳಾಗಿದ್ದಾಳೆ. ಆಗ ಗ್ರಾಮದ ಕೆಲ ಹಿರಿಯ ತಲೆಗಳು 'ಪತ್ನಿ' ಚುಡ್ಕಿ ಹೆಮಬ್ರಾಮ ನೆರವಿಗೆ ಬಂದಿದ್ದಾರೆ.
ಶೋಕದ ವಾತಾವರಣದಲ್ಲೂ 'ಪತ್ನಿ' ಚುಡ್ಕಿ ಹೆಮಬ್ರಾಮಗೆ ಧೈರ್ಯ ತುಂಬಿದ್ದಾರೆ. 'ಪತಿ' ಮಹಾಲಾಲ ಮಾರಂಡಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿರುವ ಘಳಿಗೆಯಲ್ಲೇ ಆತನ ಶವದ ಜತೆ ಚುಡ್ಕಿ ಹೆಮಬ್ರಾಮ ವಿವಾಹಕ್ಕೆ ನಿರ್ಧರಿಸಿದ್ದಾರೆ.
ಕೆಲವರು 'ಪತಿ' ಮಹಾಲಾಲ ಮಾರಂಡಿಯ ಶವ ಹಿಡ್ಕೊಂಡು ಆತನ ಬೆರಳಿನಿಂದ ಚುಡ್ಕಿ ಹೆಮಬ್ರಾಮ ಹಣೆಗೆ ಕುಂಕುಮ, ಹರಿಶಿನ ಹಚ್ಚಿಸಿದ್ದಾರೆ. ಆಕೆಯ ಹಣೆಯ ಮೇಲೆ ಕುಂಕುಮ, ಹರಿಶಿನ ಮೂಡುತ್ತಿದ್ದಂತೆ ಆ ಘಳಿಗೆಯಲ್ಲೇ ಅದನ್ನು ಅಳಿಸಿ ಹಾಕಿದ್ದಾರೆ. ಅದರಿಂದ ಚುಡ್ಕಿ ಹೆಮಬ್ರಾಮ ವಿಧವೆ ಆದಳು ಎಂದು ಘೋಷಿಸಿದ್ದಾರೆ.
ಅದಾಗುತ್ತಿದ್ದಂತೆ ವಿಧವೆ ಚುಡ್ಕಿ ಹೆಮಬ್ರಾಮ ಮುಖದ ಮೇಲೆ ನೆಮ್ಮದಿಯ ಗೆರೆಗಳು ಮೂಡಿವೆ. ಸದ್ಯ ಕಾನೂನು ದೃಷ್ಟಿಯಲ್ಲಿ ಚುಡ್ಕಿ ಹೆಮಬ್ರಾಮ ಮತ್ತು ಮಹಾಲಾಲ ಮಾರಂಡಿಯ ಮಕ್ಕಳು ಅಕ್ರಮ ಎನಿಸಿಕೊಳ್ಳುವುದಿಲ್ಲ ಎಂದು ವಿಧವೆ ಚುಡ್ಕಿ ನಿಟ್ಟುಸಿರುಬಿಟ್ಟಿದ್ದಾಳೆ. ಇದು ಅತ್ಯಂತ ವಿರಳ ಪ್ರಕರಣವಾಗಿದ್ದರೂ ಸಂತಸ/ಸಮಾಧಾನ ತಂದಿದೆ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದ್ದಾರೆ.