ಬಿಜೆಪಿ ವಿರುದ್ದ ಧನಂಜಯ್ ಕುಮಾರ್ ಹರಿಹಾಯ್ದ ಪರಿಯಿದು
ಕಾರ್ಯಕ್ರಮದ ಉದ್ದಕ್ಕೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದರೆ, ತನ್ನದೇ ಮಾತೃ ಪಕ್ಷವನ್ನು ಮತ್ತು ರಾಜ್ಯದ ಬಿಜೆಪಿ ನಾಯಕರ ವಿರುದ್ದ ಕೆಂಡಕಾರಿದ್ದಾರೆ. ಅಲ್ಲದೇ ತಾನು ವಿಶೇಷ ಪ್ರತಿನಿಧಿಯಾಗಿದ್ದಾಗ ರಾಜ್ಯಕ್ಕೆ ತಂದು ಕೊಟ್ಟ ಸವಲತ್ತು ಬೇರೆ ಯಾರೂ ತಂದುಕೊಟ್ಟಿಲ್ಲ ಎಂದು ಬೆನ್ನು ತಟ್ಟಿಕೊಂಡಿದ್ದಾರೆ.
ಸಿಎಂ ಜಗದೀಶ್ ಶೆಟ್ಟರ್ ಅವರ ಕಾರ್ಯವೈಖರಿ ವಿರುದ್ದ ಹೇಳಿಕೆ ನೀಡಿ ನೋಟೀಸ್ ಪಡೆದಿರುವ ಧನಂಜಯ್ ಕುಮಾರ್ ಪಕ್ಷ ಮತ್ತು ಪಕ್ಷದ ನಾಯಕರ ವಿರುದ್ದ ನೀಡಿರುವ ಆಯ್ದ ಹೇಳಿಕೆಗಳು:
ಜಗದೀಶ್ ಶೆಟ್ಟರ್: ನಾನು ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ನೋಡಿದ ಅತ್ಯಂತ ದುರ್ಬಲ ಸಿಎಂ. ಕಾವೇರಿ ಸಮಸ್ಯೆ ಉಲ್ಬಣಗೊಳ್ಳಲು ಶೆಟ್ಟರ್ ಕೂಡ ಒಂದು ರೀತಿಯಲ್ಲಿ ಕಾರಣ. ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅರ್ಧದಲ್ಲೇ ಹೊರಬಂದು ರಾಜ್ಯದ ವಾದ ಸಮರ್ಥವಾಗಿ ಮಂಡಿಸುವಲ್ಲಿ ವಿಫಲರಾಗಿದ್ದಾರೆ.
ಬಂದ್ ಸಮಯದಲ್ಲಿ ಜನರ ಮುಂದೆ ಬರುವುದು ಬಿಟ್ಟು ಪೋಲೀಸ್ ಬೇಲಿ ಹಾಕಿಕೊಂಡು ಮನೇಲಿ ಕೂತರೆ? ಜನರ ಸಮಸ್ಯೆಯನ್ನು ಕೇಳುವವರಾರು? ಇದೇ ಇವರ ಸ್ಥಾನದಲ್ಲಿ ಯಡಿಯೂರಪ್ಪ ಇದ್ದರೆ ಪ್ರಧಾನಿ ಮುಂದೆ ಟೇಬಲ್ ಕುಟ್ಟಿ ರಾಜ್ಯಕ್ಕೆ ಅನ್ಯಾಯವಾಗಂತೆ ನೋಡುತ್ತಿದ್ದರು. ಇದು ಯಡಿಯೂರಪ್ಪ ಮತ್ತು ನಮ್ಮ ಪಕ್ಷದ ಇತರ ನಾಯಕರಿಗೆ ಇರುವ ವ್ಯತ್ಯಾಸ.
ಅನಂತ್ ಕುಮಾರ್: ಕಾವೇರಿ ವಿಚಾರದಲ್ಲಿ ಮಾನ್ಯ ಅನಂತ್ ಕುಮಾರ್ ಅವರೇ ಎಲ್ಲಿದ್ದೀರಾ? ಬೆಂಗಳೂರು ನಗರ ಸಂಸದರಲ್ಲವೆ ನೀವು? ದೆಹಲಿಯಲ್ಲಿ ಹೈಕಮಾಂಡ್ ನಾನು ಹೇಳಿದ ಹಾಗೆ ಕೇಳುತ್ತಾರೆ ಎಂದು ಎಲ್ಲರ ಬಳಿ ಹೇಳಿಕೊಂಡು ಬರುತ್ತಿರುವ ನೀವು ರಾಜ್ಯದ ಸಂಸದರನ್ನು ಕರೆದುಕೊಂಡು ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಯಾಕೆ ಹೋಗುತ್ತಿಲ್ಲ?
ಯಡಿಯೂರಪ್ಪ ಅವರ ವಿರುದ್ದ ಪಿತೂರಿ ನಡೆಸುವುದಕ್ಕೆ ಮಾತ್ರ ನೀವು ಸೀಮಿತನಾ ? ರಾಜ್ಯದ ಬಿಜೆಪಿಯ ಇಂದಿನ ಪರಿಸ್ಥಿತಿಗೆ ಪರೋಕ್ಷವಾಗಿ ನೀವಲ್ಲವೇ ಕಾರಣ? ದೆಹಲಿಯಲ್ಲಿ ಪ್ರಭಾವಿ ನಾಯಕರಲ್ಲವೇ ನೀವು ಹೋಗಿ ರಾಜ್ಯಕ್ಕೆ ಬರಬೇಕಾಗಿರುವ ಅನುದಾನವನ್ನು ಕೇಂದ್ರದಿಂದ ಕೊಡಿಸಿ.
ಈಶ್ವರಪ್ಪ: ಒಂದಲ್ಲಾ ಒಂದು ವಿಚಾರದಲ್ಲಿ ಈಶ್ವರಪ್ಪನವರು ಯಡಿಯೂರಪ್ಪ ವಿರುದ್ದ ಕುತಂತ್ರ ಮಾಡುತ್ತಲೇ ಇದ್ದಾರೆ. ನಾನು ಬಿಜೆಪಿ ರಾಜ್ಯಾಧ್ಯಕ್ಷ, ಟಿಕೆಟ್ ಯಾರಿಗೆ ಕೊಡಬೇಕು ಯಾರಿಗೆ ಕೊಡಬಾರದೆಂದು ನನಗೆ ತಿಳಿದಿದೆ ಎನ್ನುತ್ತಾರೆ. ಯಡಿಯೂರಪ್ಪನವರ ಬೆಂಬಲಿಗರು ಈಶ್ವರಪ್ಪ ಬಳಿ ಟಿಕೆಟ್ ಕೇಳಲು ಅವರ ಮನೆ ಬಾಗಿಲು ಕಾಯೋಲ್ಲ.
ಮುಂದಿನ ಅಸೆಂಬ್ಲಿ ಚುನಾವಣೆಗೆ ಯಡಿಯೂರಪ್ಪನವರು ಮತ್ತು ಅವರ ಬೆಂಬಲಿಗರು ಅವರ ಬಳಿ ಟಿಕೆಟ್ ಗೆ ದಂಬಾಲು ಬೀಳುತ್ತಾರೆ ಎಂದು ಈಶ್ವರಪ್ಪ ತಿಳಿದುಕೊಂಡರೆ ಅದು ಅವರ ಭ್ರಮೆ. ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಈಶ್ವರಪ್ಪ ಮೊದಲು ಕಲ್ಪಿಸಿಕೊಳ್ಳಲಿ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕಾರಣ ಎನ್ನುವುದನ್ನು ಬಿಜೆಪಿಯ ವರಿಷ್ಠ ನಾಯಕರುಗಳು ಮೊದಲು ತಿಳಿದುಕೊಳ್ಳಲಿ. ನಾನು ಯಡಿಯೂರಪ್ಪ ಅವರ ಬೆಂಬಲಿಗ, ಅವರೇ ನನ್ನ ನಾಯಕರು.
ಬಿಜೆಪಿಯ ಕೇಂದ್ರ ನಾಯಕರು ಪಿತೂರಿ ನಡೆಸುವವರ ಮಾತು ಕೇಳುವುದನ್ನು ನಿಲ್ಲಿಸಲಿ. ಒಗ್ಗಟ್ಟಾಗಿ ಜನತೆ ಮುಂದೆ ಹೋದರೆ ಮಾತ್ರ ನಮಗೆ ಮುಂದಿನ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡುತ್ತಾರೆ ಎಂದು ಧನಂಜಯ್ ಕುಮಾರ್ ಸುವರ್ಣ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸುವರ್ಣ ವಾಹಿನಿಯ ಹಮೀದ್ ಪಾಳ್ಯ ಈ ಸಂದರ್ಶನ ನಡೆಸಿಕೊಟ್ಟರು.