ನಿರ್ಮಲ ಒನ್ ಇಂಡಿಯಾದಲ್ಲಿ ಬಿಬಿಎಂಪಿ ಕಸ ವಿಂಗಡಣೆ
ಜಯನಗರ (ಬೆಂಗಳೂರು), ಅ.5: ಮಹಾನಗರ ಪಾಲಿಕೆಯು ತಡವಾಗಿಯಾದರೂ ರಾಜಧಾನಿಯನ್ನು ಸ್ವಚ್ಛಗೊಳಿಸುವ ಕೈಕಂಕರ್ಯಕ್ಕೆ ಕೈಹಾಕಿದೆ. ಗಮನಾರ್ಹವೆಂದರೆ ನಿಮ್ಮ ನೆಚ್ಚಿನ oneindia.kannada ಸಹ ಇದಕ್ಕೆ ಕೈಜೋಡಿಸಿದೆ.
ಕಸ, ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ಒಂದೆರಡು ತಿಂಗಳಿಂದ ಇನ್ನಿಲ್ಲದಂತೆ ಕಾಡುತ್ತಿದೆ. ಅದರಿಂದ ಮುಕ್ತಿ ಪಡೆಯಲು ಪಾಲಿಕೆ ಹರಸಾಹಸಪಟ್ಟಿದೆ. ಕೊನೆಗೆ 'ಮನೆಯಲ್ಲಿಯೇ ಕಸ ವಿಂಗಡಿಸಿ' ಎಂದು ಬೆಂಗಳೂರು ಮಹಾಜನತೆಯನ್ನು ಕೇಳಿಕೊಂಡಿದೆ.
ಅಂದರೆ - ಮನೆಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸಬೇಕು. ಪ್ಲಾಸ್ಟಿಕ್ ಬೇರ್ಪಡಿಸಿ ಕಸ ನೀಡಬೇಕು. ಪ್ರತಿ ನಿತ್ಯ ಹಸಿ ಕಸವನ್ನು ಮತ್ತು ವಾರಕ್ಕೊಮ್ಮೆ ಒಣ ಕಸವನ್ನು ಸಂಗ್ರಹಿಸಿ ಕೊಡಿ. ಪಾಲಿಕೆಯ ಪೌರ ಕಾರ್ಮಿಕರಿಗೆ ಕಸವನ್ನು ನೇರವಾಗಿ ಹಸ್ತಾಂತರಿಸಬೇಕು ಎಂಬುದು ಮಹಾನಗರ ಪಾಲಿಕೆಯ ಕಳಕಳಿ.
ಪಾಲಿಕೆಯ ಈ ಮನವಿಯನ್ನು ಆಲಿಸಿದ oneindia.kannada ಆಡಳಿತಾಧಿಕಾರಿ ಬಾಲರಾಜ್ ತಂತ್ರಿ ಅವರು 'ಇದು ಮನೆಗಷ್ಟೇ ಏಕೆ ಸೀಮಿತವಾಗಬೇಕು. ನಗರದಲ್ಲಿ ಲಕ್ಷಾಂತರ ಕಚೇರಿಗಳಿವೆ. ಅಲ್ಲೂ ಕಸ ಬೀಳುತ್ತದೆ. ಹಾಗಾಗಿ ಕಚೇರಿಗಳಲ್ಲೂ ಈ ಕಸ ವಿಂಗಡಣೆಯನ್ನು ಅಳವಡಿಸಿಕೊಂಡರೆ ಹೇಗೆ?' ಎಂದು ಯೋಚಿಸಿ, ಮನೆಯೇ ಮೊದಲ ಶಾಲೆ ಎಂಬಂತೆ ತಕ್ಷಣ ನಮ್ಮ ಕಚೇರಿಯಲ್ಲಿ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ.
ದಟ್ಸ್ ಕನ್ನಡ ಸಂಸ್ಥೆಯ ವಿಶಾಲವಾದ ಕ್ಯಾಂಟೀನಿನಲ್ಲಿ ಪ್ರತಿನಿತ್ಯ ನೂರಾರು ಮಂದಿ ಊಟ ಮಾಡುತ್ತಾರೆ. ಈ ಪ್ಲಾಸ್ಟಿಕ್ ಯುಗದಲ್ಲಿ ಒಣ ಕಸ ಹೆಚ್ಚಾಗಿ ಬೀಳುತ್ತದೆ ಎಂಬುದನ್ನು ಗಮನಿಸಿದ ಬಾಲರಾಜ್, ಸೀದಾ ಹೋಗಿ 2 ದೊಡ್ಡ ಡಸ್ಟ್ ಬಿನ್ ಗಳನ್ನು ಖರೀದಿಸಿ ತಂದಿದ್ದಾರೆ. ಒಂದರಲ್ಲಿ ಒಣ ಮತ್ತೊಂದರಲ್ಲಿ ಹಸಿ ತ್ಯಾಜ್ಯಗಳನ್ನು ಹಾಕುವುದಕ್ಕೆ ಇದುಸಹಾಯಕವಾಗಿದೆ.
ಆಡಳಿತ ಮಂಡಳಿಯ ಈ ಪ್ರಯತ್ನದ ಬಗ್ಗೆ ತಲೆದೂಗಿದ ಉದ್ಯೋಗಿಗಳು ಹೆಮ್ಮೆಯಿಂದ ತ್ಯಾಜ್ಯಗಳನ್ನು ಬೇರ್ಪಡಿಸಿ, ಆಯಾ ಡಸ್ಟ್ ಬಿನ್ ಗಳಲ್ಲಿ ಹಾಕುತ್ತಿದ್ದಾರೆ. ತನ್ಮೂಲಕ ಬಿಬಿಎಂಪಿ ಪ್ರಯತ್ನಕ್ಕೆ ಒಂದಷ್ಟು ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
ಸಾವಿರಾರು ಐಟಿ ಕಂಪನಿಗಳೂ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ದಿನದ 24 ಗಂಟೆಯೂ ದುಡಿಯುವ ಕಂಪನಿ ಕಚೇರಿಗಳು ಬೆಂಗಳೂರಿನಲ್ಲಿ ಇವೆ. ಆ ಕಂಪನಿಗಳು ಇಂತಹ ಒಂದು ಸಣ್ಣ ಪ್ರಯತ್ನಕ್ಕೆ ಕೈಹಾಕಿ ಮಾದರಿಯಾಗಬಹುದಲ್ವಾ, ಏನಂತೀರಿ ?