ಬಗೆಹರಿಯದ ಕಾವೇರಿ ಸಮಸ್ಯೆ:ಅಂಬರೀಶ್ ಹೇಳಿದ ಸತ್ಯಕಥೆ
ವಿಶ್ವ ಒಕ್ಕಲಿಗರ ವೇದಿಕೆ ಆಯೋಜಿಸಿದ್ದ ನಗರದ ಪುರಭವನದಿಂದ ಕೆಆರ್ಎಸ್ ಜಲಾಶಯದವರೆಗಿನ ಬೃಹತ್ ಕಾರು ಜಾಥಾದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅಂಬರೀಶ್, ಕಾವೇರಿ ಸಮಸ್ಯೆ ಬಗೆಹರಿಯುವುದು ಯಾವುದೇ ಪಕ್ಷಕ್ಕೆ ಬೇಕಾಗಿಲ್ಲ. ಪರಿಸ್ಥಿತಿಯ ಲಾಭ ತೆಗೆದುಕೊಳ್ಳಲು ಎಲ್ಲರೂ ಬಯಸುತ್ತಾರೆಯೇ ವಿನಃ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಿಲ್ಲ.
ಕರ್ನಾಟಕ ಮತ್ತು ತಮಿಳುನಾಡಿನ ರೈತರ ಒಂದು ಕಡೆ ಕೂತು ಸೌಹಾರ್ದಯುತವಾಗಿ ಮಾತುಕತೆ ನಡೆಸಿದರೆ ಮಾತ್ರ ಆದಷ್ಟು ಬೇಗ ದಶಕದ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅಂಬರೀಶ್ ಹೇಳಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರಕಾರ ಈಗ ನಡೆಯುತ್ತಿರುವ ಕಾವೇರಿ ಹೋರಾಟ ಇಷ್ಟು ತೀವ್ರತೆ ಪಡೆಯುತ್ತದೆಂದು ಭಾವಿಸಿರಲಿಕಿಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆಯಿಂದ ಜನರು ಹೋರಾಟಕ್ಕೆ ಧುಮುಕುತ್ತಿದ್ದಾರೆ. ಜನರ ಭಾವನೆಯ ಜೊತೆ ಆಟವಾಡಬೇಡಿ ಎಂದು ಅಂಬರೀಶ್ ಎಚ್ಚರಿಕೆ ನೀಡಿದ್ದಾರೆ.
ನಮಗೇ ಕುಡಿಯಲು ನೀರಿಲ್ಲ. ಹೀಗಿರುವಾಗ ಪಕ್ಕದ ರಾಜ್ಯಕ್ಕೆ ನೀರು ಬಿಡಲು ಹೇಗೆ ಸಾಧ್ಯ? ಇದನ್ನು ಮನದಟ್ಟು ಮಾಡಿಕೊಡುವಲ್ಲಿ ರಾಜಕಾರಣಿಗಳು ನಿಸ್ಸಹಾಯಕರಾಗಿದ್ದಾರೆ. ಆದ್ದರಿಂದ ಸ್ವತಃ ಜನರೇ ಬೀದಿಗಿಳಿದು ರಾಜ್ಯಕ್ಕೆ ಪ್ರಸ್ತುತ ಕಾವೇರಿಯ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡಬೇಕಿದೆ ಎಂದು ಅಂಬರೀಶ್ ಹೇಳಿದ್ದಾರೆ.
ಕಾವೇರಿ ನಮ್ಮದು, ಇದನ್ನು ಶತಾಯಗತಾಯ ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಆದರೆ, ಹೋರಾಟ ಶಾಂತಿಯುತವಾಗಿರಲಿ ಎಂದು ಅಂಬರೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.