11 ಸಾವಿರ ಕೋಟಿ ಸಂಗ್ರಹ ಗುರಿ ಇದೆ : ರೇಣುಕಾ
ಪ್ರಸ್ತುತ ವರ್ಷ 11,200 ಕೋಟಿ ರೂ. ಆದಾಯ ಸಂಗ್ರಹದ ಗುರಿ ನಿಗದಿಯಾಗಿದೆ. ಕಳೆದ ಏಪ್ರಿಲ್ನಿಂದ ಸೆಪ್ಟೆಂಬರ್ 18ರವರೆಗೆ 5495.65 ಕೋಟಿ ರೂ.ಗಳ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 1080.70 ಕೋಟಿ ರೂ. ಹೆಚ್ಚು ಸಂಗ್ರಹವಾಗಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಅಬಕಾರಿ ಸಚಿವರಾದ ಮೇಲೆ ರಾಜ್ಯದ ಮೈಸೂರು, ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಹೊಸಪೇಟೆ, ಬೆಳಗಾವಿ ಮುಂತಾದೆಡೆ ನಾಲ್ಕಾರು ಬಾರಿ ಪ್ರವಾಸ ಮಾಡಿ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಕಳ್ಳಭಟ್ಟಿ ಕೇಂದ್ರಗಳನ್ನು ಮಟ್ಟ ಹಾಕಿದ್ದೇವೆ ಎಂದು ತಿಳಿಸಿದರು.
ಈ ಭಾಗದಲ್ಲಿ ಒಟ್ಟು 276 ಕಳ್ಳಭಟ್ಟಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 253 ಕೇಂದ್ರಗಳನ್ನು ನಿರ್ಮೂಲನೆ ಮಾಡಲಾಗಿದೆ. ಇನ್ನೂ 23 ಕೇಂದ್ರಗಳು ಬೀದರ್, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳಲ್ಲಿ ನಿರ್ಮೂಲನೆ ಮಾಡಬೇಕಾಗಿದೆ ಎಂದರು.
ಒಟ್ಟು 4526 ಪ್ರಕರಣಗಳು ದಾಖಲಾಗಿದ್ದು, 147 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಳ್ಳಾರಿ- ಹುಬ್ಬಳ್ಳಿ ಮೂಲಕ ನಕಲಿ ಮದ್ಯ ಮಾರಾಟ ಜಲಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ 11.65 ಲಕ್ಷ ರೂ.ಮಲ್ಯದ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.
ರಾಜ್ಯದಲ್ಲಿ 423 ಮದ್ಯದಂಗಡಿಗಳನ್ನು ಪ್ರಾರಂಭಿಸಲು ಎಂಎಸ್ಐಎಲ್ಗೆ ಇಲಾಖೆ ಅನುಮತಿ ಕೊಟ್ಟಿದೆ. ಅಕ್ರಮವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾರಾಟವಾಗುವ ಮದ್ಯ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.
ಕಳೆದ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ 875 ಕಳ್ಳಭಟ್ಟಿ ಕೇಂದ್ರಗಳಿತ್ತು. ನಿರಂತರ ದಾಳಿ ನಡೆಸಿ ಸುಮಾರು 400 ಕಳ್ಳಭಟ್ಟಿ ಕೇಂದ್ರಗಳನ್ನು ನಾಶ ಮಾಡಲಾಗಿದೆ. ಉಳಿದ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುವುದು.
ಸುಮಾರು 11 ಜಿಲ್ಲೆಗಳನ್ನು ಈಗ ಕಳ್ಳಭಟ್ಟಿ ಮುಕ್ತ ಜಿಲ್ಲೆಗಳಾಗಿ ಪರಿವರ್ತಿಸಲಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.
ಕೊನೆಯಲ್ಲಿ ಎಂದಿನಂತೆ ಯಡಿಯೂರಪ್ಪ ಅವರ ಮುಂದಿನ ನಡೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಯಡಿಯೂರಪ್ಪ ಅವರು ಹೊಸ ಪಕ್ಷ ಸ್ಥಾಪನೆ ಬಗ್ಗೆ ಇನ್ನೂ ಮಾತುಕತೆ ಹಂತದಲ್ಲಿದ್ದು, ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.