ಈಶ್ವರಪ್ಪ ಸ್ನೇಹಕ್ಕೆ ಎಳ್ಳು ನೀರು ಬಿಟ್ಟ ಬಿಎಸ್ವೈ
ಈಶ್ವರಪ್ಪ ತನ್ನನ್ನು ತಾನು ಮಹಾ ಮೇಧಾವಿ ಎಂದು ತಿಳಿದುಕೊಳ್ಳುವುದು ಬೇಡ. ಮಾಧ್ಯಮಗಳ ಮುಂದೆ ಯಡಿಯೂರಪ್ಪ ಪಕ್ಷ ಬಿಡಬಾರದೆಂದು ಹೇಳಿಕೆ ನೀಡುವ ಈಶ್ವರಪ್ಪ ಹಿಂದೆ ಯಡಿಯೂರಪ್ಪ ಪಕ್ಷ ಬಿಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಅಭಿವೃದ್ದಿ ವಿಚಾರದಲ್ಲಿ ಈಶ್ವರಪ್ಪ ರಾಜಕೀಯ ಮಾಡುತ್ತಿದ್ದಾರೆ. ಇನ್ನು ಮುಂದೆ ಈಶ್ವರಪ್ಪ ರಾಜ್ಯಾಧ್ಯಕ್ಷ ಮತ್ತು ಡಿಸಿಎಂ ಆಗಿರುವ ತನಕ ಅವರ ಜೊತೆ ಯಾವುದೇ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಶಪಥ ಮಾಡಿದ್ದಾರೆ.
ನಾನು ಪಕ್ಷದಲ್ಲಿ ಯಾವುದೇ ಹುದ್ದೆ ಅಪೇಕ್ಷಿಸುವುದಿಲ್ಲ. ನನ್ನನ್ನು ಪಕ್ಷದಲ್ಲಿ ತುಳಿಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಹೈಕಮಾಂಡ್ ಗೆ ಈ ವಿಚಾರ ತಿಳಿದಿದ್ದರೂ ಅದು ಜಾಣ ಕುರುಡು ರಾಜಕಾರಣ ಮಾಡುತ್ತಿದೆ.
ಇದೇ ಡಿಸೆಂಬರ್ ಒಳಗೆ ನಾನು ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ. ಅರುಣ್ ಜೆಟ್ಲೇ ಮತ್ತು ಪ್ರಧಾನ ಜೊತೆ ಮಾತುಕತೆ ನಡೆಸುವ ಅವಶ್ಯಕತೆ ಬಿದ್ದರೆ ದೆಹಲಿ ಹೋಗಿ ಅವರನ್ನು ಭೇಟಿ ಮಾಡುವೆ ಎಂದು ಯಡಿಯೂರಪ್ಪ ಮಾಧ್ಯಮದವರಿಗೆ ಹೇಳಿದ್ದಾರೆ.
ಈ ಮಧ್ಯೆ ಇಬ್ಬರು ನಾಯಕರುಗಳ ಕಿತ್ತಾಟಕ್ಕೆ ಸರಕಾರೀ ಕಾರ್ಯಕ್ರಮವೊಂದು ರದ್ದಾಗಿದೆ. ಶಿವಮೊಗ್ಗದಲ್ಲಿ ಇಂದು ಉದ್ಘಾಟನೆ ಗೊಳ್ಳಬೇಕಾಗಿದ್ದ ಗಾಂಧೀ ಪಾರ್ಕ್ ಕಾರ್ಯಕ್ರಮ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಜಿಲ್ಲಾಧಿಕಾರಿಗಳು ಪ್ರಕಟಿಸಲಿದ್ದಾರೆ ಎಂದು ಡಿಸಿಎಂ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.