ಡೀಸೆಲ್ ಬೆಲೆ ಮತ್ತೆ 4 ರು. ಏರಿಸಲು ಶಿಫಾರಸು!
ಸೆಪ್ಟೆಂಬರ್ 13ರಂದು ಡೀಸೆಲ್ ಬೆಲೆಯನ್ನು ಲೀಟರಿಗೆ 5 ರು.ನಷ್ಟು ಏರಿಸಿದ್ದನ್ನು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದ್ದನ್ನು ವಿರೋಧಿಸಿ ಎನ್ಡಿಎ ಅಂಗಪಕ್ಷಗಳು ಭಾರತ ಬಂದ್ ಕರೆ ನೀಡಿದ್ದವು. ಯುಪಿಎ ಜೊತೆ ಮೈತ್ರಿಕೂಟದಲ್ಲಿದ್ದ ತೃಣಮೂಲ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದರಿಂದ ಯುಪಿಎ ಸರಕಾರದ ಬುಡ ಅಲ್ಲಾಡುತ್ತಿದೆ.
ಡೀಸೆಲ್ ಬೆಲೆಯನ್ನು ಏರಿಸುವುದರ ಜೊತೆ, 2014 ಅಥವಾ 2015ರಿಂದ ಜಾರಿಗೆ ಬರುವಂತೆ ಡೀಸೆಲ್ ಬೆಲೆ ಏರಿಕೆ ಅಥವಾ ಇಳಿಕೆಯನ್ನು ತೈಲ ಕಂಪನಿಗೇ ಬಿಡಬೇಕು, ಕೇಂದ್ರದ ನಿಯಂತ್ರಣದಿಂದ ಡೀಸೆಲ್ ಕೂಡ ಮುಕ್ತವಾಗಬೇಕು ಎಂದು ಸರಕಾರಿ ತಜ್ಞರ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಡೀಸೆಲ್ ಕೂಡ ಕೇಂದ್ರದ ನಿಯಂತ್ರಣದಿಂದ ಮುಕ್ತವಾದರೆ ಡೀಸೆಲ್ ಬೆಲೆ ಗಗನ ಮುಟ್ಟುವುದು ಖಂಡಿತ.
ಈ ಶಿಫಾರಸು ಪತ್ರವನ್ನು ತಜ್ಞರ ಸಮಿತಿ ಸೆಪ್ಟೆಂಬರ್ 3ರಂದು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಅದನ್ನು ಶುಕ್ರವಾರ ಬಹಿರಂಗಪಡಿಸಲಾಗಿದೆ. ಭಾರತ ಎದುರಿಸುತ್ತಿರುವ ವಿತ್ತೀಯ ಕೊರೆಯನ್ನು ನೀಗಿಸಿಕೊಳ್ಳಲು ಇಂಥ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗಲೇಬೇಕಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಅಮೂಲಾಗ್ರವಾಗಿ ಮೇಲೆತ್ತಲು ತ್ವರಿತ ಸುಧಾರಣೆಗೆ ಕೇಂದ್ರ ಕೈಹಾಕಬೇಕು. ಇಲ್ಲದಿದ್ದರೆ, ಮುಂದೆ ಭಾರೀ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ಎಂದು ತಜ್ಞರ ಸಮಿತಿ ಮುನ್ನೆಚ್ಚರಿಕೆ ನೀಡಿದೆ.