ಜಯನಗರ: ಜಲಮಂಡಳಿ ಬಿಡಿಎ ಬಿಬಿಎಂಪಿ 'ಸಕಾಲ'ಕ್ಕೆ
ಸಚಿವ ಸುರೇಶ್ ಕುಮಾರ್ ಹೇಳಿರುವುದೇನು?: ಅಕ್ಟೋಬರ್ 15 ರಿಂದ ಪ್ರಾಯೋಗಿಕವಾಗಿ ಜಯನಗರ ಕ್ಷೇತ್ರದಲ್ಲಿ ಈ ಸೇವೆಗಳನ್ನು ಪ್ರಾರಂಭಿಸಿ ನವೆಂಬರ್ 2ರಿಂದ ಎಲ್ಲ ಕೇಂದ್ರಗಳಲ್ಲಿ ಆರಂಭಿಸಲಾಗುವುದು.
ಸಕಾಲ ಸೇವೆಗಳು ಯಾವುವು?: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಖಾತೆಗಳ ನೋಂದಣಿ ಮತ್ತು ವರ್ಗಾವಣೆ, ಬಹುಮಹಡಿ ಕಟ್ಟಡಗಳ ಯೋಜನೆಯ ಮಂಜೂರಾತಿ, ಖಾತಾ ಪತ್ರ ನೀಡಿಕೆ, ಅನುಮೋದಿತ ಬಡಾವಣೆಗೆ ಖಾತಾ ಪತ್ರ ನೀಡುವುದು, ಮರಣ ಪ್ರಕರಣಗಳಲ್ಲಿ ಖಾತಾ ಬದಲಾವಣೆ, ಹಂಚಿಕೆಯಾದ ನಿವೇಶನದ ಖಾತಾ ಬದಲಾವಣೆ, ಸ್ವಾಧೀನಾನುಭವ ಪ್ರಮಾಣ ಪತ್ರ, ನಿವೇಶನಗಳ ಭಾಗ ಮತ್ತು ಒಗ್ಗೂಡಿಸುವಿಕೆ, ಭೂ ಪರಿವರ್ತನೆ ಸೇರಿದಂತೆ ಒಟ್ಟು 12 ಸೇವೆಗಳನ್ನು ಸಾರ್ವಜನಿಕರ ಬೇಡಿಕೆ ಮೇರೆಗೆ ಸೇರ್ಪಡೆ ಗೊಳಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಲ್ಕು ಹೊಸ ಸೇವೆಗಳನ್ನು ಸಕಾಲದಡಿ ಸೇರ್ಪಡೆಗೊಳಿಸಲಾಗುತ್ತಿದೆ. ಇದರಿಂದ ಒಟ್ಟು 265 ಸೇವೆಗಳು ಸಕಾಲ ವ್ಯಾಪ್ತಿಗೆ ಒಳ ಪಟ್ಟಂತಾಗಿದೆ.
ಜಲಮಂಡಳಿಗೆ ಜೀವ: ನೀರು ಸರಬರಾಜು ಮತ್ತು ಒಳಚರಂಡಿಯ ಹಳೆಯ ಪೈಪುಗಳನ್ನು ಹಂತ-ಹಂತವಾಗಿ ಬದಲಾವಣೆ ಮಾಡುವಂತೆ ಜಲಮಂಡಳಿಗೆ ಸೂಚನೆ ನೀಡಲಾಗಿದ್ದು, ಹಲವು ಪ್ರದೇಶಗಳಲ್ಲಿ ಈಗಾಗಲೆ ಈ ಕಾಮಗಾರಿ ಚಾಲನೆಯಲ್ಲಿದೆ ಎಂದು ನಗರಾಭಿವೃದ್ಧಿ, ಬೆಂಗಳೂರು ಜಲಮಂಡಳಿ ಸಚಿವ ಎಸ್.ಸುರೇಶ್ಕುಮಾರ್ ಹೇಳಿದ್ದಾರೆ. ಪ್ರಸ್ತುತ ಇರುವ ನೀರಿನ ಪೈಪು ಮತ್ತು ಒಳಚರಂಡಿ ಪೈಪುಗಳ ಗಾತ್ರ ಇಂದಿನ ಜನಸಾಂದ್ರತೆಯ ಪ್ರಮಾಣಕ್ಕೆ ಸಾಲದು. ಜತೆಗೆ ತೀರಾ ಹಳೆಯದೂ ಆಗಿರುವುದರಿಂದ ಅವುಗಳ ಸಾಮರ್ಥ್ಯ ಕುಗ್ಗಿದೆ. ಹಂತ ಹಂತವಾಗಿ ಇಂತಹ ಹಳೆಯ ಪೈಪುಗಳನ್ನು ಬದಲಾವಣೆ ಮಾಡಲು ಜಲಮಂಡಳಿ ಕ್ರಮ ಕೈಗೊಂಡಿದೆ.
ಇದುವರೆಗೆ ಸಕಾಲ ಯೋಜನೆಯಡಿ 1,12,95,000 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 1,07,65,000 ವಿಲೇವಾರಿ ಮಾಡಲಾಗಿದೆ. ಸಕಾಲ ಯೋಜನೆಯಡಿ ಅರ್ಜಿ ವಿಲೇವಾರಿ ಮಾಡಿದ ಜಿಲ್ಲೆಗಳ ಪೈಕಿ ಆಗಸ್ಟ್- 2012ರ ಮಾಹೆಯಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಹಾವೇರಿ ಮತ್ತು ಕೋಲಾರ ಜಿಲ್ಲೆಗಳು ಅರ್ಜಿಗಳ ವಿಲೇವಾರಿಯಲ್ಲಿ ಉತ್ತಮ ಸ್ಥಾನ ಕಾಯ್ದು ಕೊಂಡಿವೆ.