ಮಣಿದ ಹೈಕಮಾಂಡ್: ಬಿಎಸ್ವೈ ಮುಂದಿನ ನಡೆಯೇನು?
ತಾಜಾ ವರದಿಯ ಪ್ರಕಾರ ಯಡಿಯೂರಪ್ಪ ಅವರು ಇಂದು 12 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಅತ್ತ ದೂರದ 'ಸೂರಜ್ ಕುಂಡ'ದಲ್ಲಿ ಪಕ್ಷದ ವರಿಷ್ಠರು ತಮ್ಮ ವಿರುದ್ಧ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿರುವುದರಿಂದ ಇತ್ತ ಯಡಿಯೂರಪ್ಪ ಅವರು ತಮ್ಮ ಸ್ವಗೃಹದಲ್ಲಿ ಕೊತಕೊತನೆ ಕುದಿಯತೊಡಗಿದ್ದಾರೆ.
ಕರ್ನಾಟಕದ ಬಿಜೆಪಿಗೆ ತುರ್ತಾಗಿ/ ಬಹುಮುಖ್ಯವಾಗಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಹೊಸಬರನ್ನು ಪ್ರತಿಷ್ಠಾಪಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಮಧ್ಯೆಯೇ ಯಾವುದೇ ಕಾರಣಕ್ಕೂ ಬಿಎಸ್ ಯಡಿಯೂರಪ್ಪಗೆ ಮಣೆ ಹಾಕಬಾರದು ಎಂದು ಪಕ್ಷದ ವರಿಷ್ಠರು ತೀರ್ಮಾನಿಸಿದಂತಿದೆ. ಯಾವುದಕ್ಕೇ ಆಗಲಿ ರಾಜ್ಯ ಬಿಜೆಪಿ ಪಾಲಿಗೆ ಇಂದು ಅತ್ಯಂತ ಮಹತ್ವದ ಮತ್ತು ನಿರ್ಣಾಕವಾಗಲಿದೆ.
ಒಂದು ಕಡೆ ಸ್ವತಃ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ರಾಜ್ಯಾಧ್ಯಕ್ಷ ನೇಮಕವನ್ನು ಮುಂದೂಡಿ ಎಂದು ಅಲವತ್ತುಕೊಂಡಿದ್ದಾರೆ. ವರಿಷ್ಠರ ಮನದಿಂಗಿತ ಅರಿತ ಶೆಟ್ಟರ್ ಅವರು ಒಂದು ವೇಳೆ ವರಿಷ್ಠರು ನಿಜಕ್ಕೂ ಖಡಕ್ ನಿರ್ಧಾರ ತೆಗೆದುಕೊಂಡರೆ... ಯಡಿಯೂರಪ್ಪ ಪಾಳಯದವರು ತಮ್ಮನ್ನು ಸಿಎಂ ಕುರ್ಚಿಯಲ್ಲಿ ಸುಮ್ಮನಿರಲು ಬಿಡುವುದಿಲ್ಲ ಎಂಬ ಆತಂಕದಲ್ಲಿದ್ದಾರೆ. ಹಾಗಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೇಮಕದ ಗೊಂದಲಗಳಿಗೆ ತೆರೆ ಎಳೆಯಲು ಬಿಜೆಪಿ ಕಾರ್ಯಕಾರಿಣಿ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಇದರ ಹೊರತಾಗಿಯೂ ಯಡಿಯೂರಪ್ಪ ವಿರೋಧಿ ಪಾಳೆಯವು ಈ ಬಾರಿ ಯಡಿಯೂರಪ್ಪಗೆ ಮಮರ್ಮಾಘಾತ ನೀಡಲೇ ಬೇಕು ಎಂದು ನಿರ್ಧರಿಸಿ, ಕಾರ್ಯಮಗ್ನವಾಗಿದೆ. ಹೇಗಾದರೂ ಮಾಡಿ ರಾಜ್ಯಾಧ್ಯಕ್ಷ ನೇಮಕಕ್ಕೆ ಹಿರಿಯರನ್ನು ಒಪ್ಪಿಸಿ, ತಮ್ಮ candidate ಅನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ತರಾತುರಿಯಲ್ಲಿದೆ.
ಸದ್ಯದ ಮಾಹಿತಿ ಪ್ರಕಾರ ಸಂಸದರಾದ ನಳಿನ್ ಕುಮಾರ್ ಮತ್ತು ಪ್ರಹ್ಲಾದ ಜೋಶಿ ಅವರುಗಳ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬರುತ್ತಿದೆ.
ಹೀಗಾಗಿ ನಗರದ ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಯಡಿಯೂರಪ್ಪನವರು 3 ದಿನಗಳಿಂದ 'ಶಾಂತಿ ಮಂತ್ರ' ಪಠಿಸುತ್ತಿದ್ದ ಯಡಿಯೂರಪ್ಪನವರು ಹಣೆಯಲ್ಲಿ ಚಿಂತೆಯ ಗೆರೆಗಳನ್ನು ಹೊತ್ತು ನಗರಕ್ಕೆ ವಾಪಸಾಗಿದ್ದಾರೆ. ಇಂದು ಸಂಜೆಯ ವೇಳೆಗೆ ಏನಾಗುವುದೋ ಕಾದುನೋಡಬೇಕು.